ನೋಯ್ಡಾ: ಹಾವಿನ ವಿಷವನ್ನು ಮಾದಕ ವಸ್ತುವನ್ನಾಗಿ ಬಳಕೆ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ವಿವಾದಾತ್ಮಕ ಯೂಟ್ಯೂಬರ್, ಬಿಗ್ ಬಾಸ್ ವಿನ್ನರ್ ಎಲ್ವಿಶ್ ಯಾದವ್ ಅಲಿಯಾಸ್ ಸಿದ್ಧಾರ್ಥ್ ಯಾದವ್ಗೆ ನೊಯಿಡಾದ ಗೌತಮ ಬುದ್ಧ ನಗರ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದೆ.
ಎಲ್ವಿಶ್ ತಾನು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಮಾದಕ ವಸ್ತುವನ್ನಾಗಿ ಬಳಸುತ್ತಿದ್ದ ಆರೋಪದ ಮೇಲೆ ಕಳೆದ ಭಾನುವಾರ ನೊಯಿಡಾ ಪೊಲೀಸರು ಆತನನ್ನು ಬಂಧಿಸಿದ್ದರು.
ಎಲ್ವಿಶ್ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತಲಾ ₹50,000ಗಳ ಎರಡು ಬಾಂಡ್ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ಸದ್ಯ ನೊಯಿಡಾದ ಲಕ್ಸರ್ ಜೈಲಿನಲ್ಲಿರುವ ಎಲ್ವಿಶ್ ಜೈಲಿನಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಾವು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಎಂದು ಎಲ್ವಿಶ್ ಪರ ವಕೀಲ ಪ್ರಶಾಂತ್ ರಾಠಿ ತಿಳಿಸಿದ್ದಾರೆ.