ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಿಂದ ಪವಿತ್ರ ಇಟ್ಟಿಗೆಯನ್ನು ತರಲಾಗಿದೆ. ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಮುಸ್ಲಿಮರಿಗೆ ಪರಿಹಾರವಾಗಿ ನೀಡಿದ ಅಯೋಧ್ಯೆಯ ಭೂಮಿಯಲ್ಲಿ ಹೊಸ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಲ್ಲಿ ಪವಿತ್ರಗೊಳಿಸಲ್ಪಟ್ಟಿರುವ ಇಟ್ಟಿಗೆಯನ್ನು ಬಳಸಲಾಗುತ್ತದೆ.
ಈ ಪವಿತ್ರ ಇಟ್ಟಿಗೆಯನ್ನು ಕಪ್ಪು ಮಣ್ಣಿನಿಂದ ಮಾಡಿದ್ದು, ಅದನ್ನು ಚಿನ್ನದಲ್ಲಿ ಕೆತ್ತಿ ಪವಿತ್ರ ಕುರಾನ್ನ ಕೆಲವು ಉಪದೇಶಗಳನ್ನು ಹೊಂದಿದೆ ಎಂದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ ಪಾದಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಇಟ್ಟಿಗೆಯನ್ನು ಮಾರ್ಚ್ 12 ರಂದು ರಂಜಾನ್ ಈದ್ ನಂತರ ಅಯೋಧ್ಯೆಯ ಮಸೀದಿ ಸ್ಥಳವಿರುವ ಧನ್ನಿಪುರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.