ವಿಶಾಖಪಟ್ಟಣಂ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿಶಾಖಪಟ್ಟಣದ ಸಂಸದ ಸತ್ಯನಾರಾಯಣ ಮತ್ತು ಅವರ ಪತ್ನಿ ಪುತ್ರ ಅವರ ಲೆಕ್ಕಪರಿಶೋಧಕರನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಪಹರಿಸಲಾಗಿತ್ತು, ಆದರೆ ಕ್ಷಿಪ್ರ ಪೊಲೀಸರು ಕೆಲವೇ ಗಂಟೆಗಳಲ್ಲಿ ಅವರನ್ನು ರಕ್ಷಿಸಿದ್ದಾರೆ.
ಮೊದಲಿಗೆ ಸಂಸದರ ಪತ್ನಿ ಜ್ಯೋತಿ ಹಾಗೂ ಅವರ ಪುತ್ರ ಶರದ್ರನ್ನು ತಂಡವೊಂದು ಅಪಹರಿಸಿದ್ದು, 1 ಕೋಟಿ ರೂ. ಗೆ ಬೇಡಿಕೆಯಿಟ್ಟಿತ್ತು. ಈ ನಿಟ್ಟಿನಲ್ಲಿ ಸಂಸದರ ಆಪ್ತ ಹಾಗೂ ಲೆಕ್ಕ ಪರಿಶೋಧಕ ಜಿ.ವೆಂಕಟೇಶ್ವರ್ ರಾವ್ ಅವರೊಂದಿಗೆ ಅಪಹರಣಕಾರರಿಗೆ ಹಣ ಹಸ್ತಾಂತರಿಸಲು ಸ್ಥಳಕ್ಕೆ ತೆರಳಿದ್ದ ವೇಳೆ ಅವರನ್ನೂ ತಂಡ ಕಿಡ್ನಾಪ್ ಮಾಡಿತ್ತು.
ಮಾಹಿತಿ ಪಡೆದ ಕೆಲವೇ ಗಂಟೆಗಳಲ್ಲಿ ಎಲ್ಲ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಒಂದಿಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಗರದಲ್ಲಿ ಸಂಚಲನ ಮೂಡಿಸಿದ್ದ ಅಪಹರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಹೇಮಂತ್ ಕುಮಾರ್ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಫೋನ್ ಸಿಗ್ನಲ್ಗಳ ಸಹಾಯದಿಂದ ಅಪಹರಣಕಾರರನ್ನು ಪತ್ತೆಹಚ್ಚಲಾಗಿದ್ದು, ಸಂಸದರು ಮತ್ತು ಅವರ ಕುಟುಂಬವನ್ನು ಏಲೂರು-ಅಮಲಾಪುರಂ ರಸ್ತೆಯಲ್ಲಿ ಸ್ಥಳದಿಂದ ರಕ್ಷಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ವಾಹನಕ್ಕೂ ಹಾನಿಯಾಗಿದೆ.