ಕೋಡೂರು: ಅನ್ನಮಯ್ಯ ಜಿಲ್ಲೆಯ ರೈಲ್ವೇ ಕೋಡೂರು ಸಮೀಪದ ಶೆಟ್ಟಿಗುಂಟಾದಲ್ಲಿ ಹಸವೊಂದು ಬಾಡಿಗೆ ತಾಯ್ತನದ ಮೂಲಕ ಉತ್ತಮ ಜಾತಿಯ ಪುಂಗನೂರು ಕರುವಿಗೆ ಭಾನುವಾರ (ಡಿ. 17) ರಾತ್ರಿ ಜನ್ಮ ನೀಡಿದೆ. ಪಶುವೈದ್ಯರು ಹಸುವಿಗೆ ಪ್ರಸವ ಮಾಡಿಸಿ, ಪುಂಗನೂರು ತಳಿಯ ಕರು ಜನನಕ್ಕೆ ಕಾರಣವಾಗಿದ್ದಾರೆ.
ರಾಷ್ಟ್ರೀಯ ಗೋಕುಲ್ ಮಿಷನ್ನ ಆಶ್ರಯದಲ್ಲಿ ಚಿಂತಲ ದೇವಿ ಅನಿಮಲ್ ಫಾರ್ಮ್ನಲ್ಲಿ ಅಭಿವೃದ್ಧಿಪಡಿಸಲಾದ ಏಳು ದಿನಗಳ ಹೆಪ್ಪುಗಟ್ಟಿದ ಪುಂಗನೂರು ತಳಿಯ ಭ್ರೂಣವನ್ನು ಶೆಟ್ಟಿಗುಂಟಾ ಗ್ರಾಮದ ರೈತ ಹರಿ ಎಂಬುವವರಿಗೆ ಸೇರಿದ ನಾಟಿ ಹಸುವಿಗೆ ಪ್ರಸವ ಮಾಡಿದ್ದಾರೆ. ಮೇ 25ರಂದು ಗರ್ಭ ಧರಿಸಿರುವುದನ್ನು ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಆರಿಫ್ ಖಚಿತಪಡಿಸಿದ್ದಾರೆ. ಕರು ಹಾಕುವ ಸಮಯದಲ್ಲಿ ಜಾನುವಾರು ಆರೋಗ್ಯ ಕಾಪಾಡಲು ಆರ್ ಬಿಕೆ ವತಿಯಿಂದ ಖನಿಜ ಲವಣಗಳಿರುವ ಮೇವನ್ನು ಉಚಿತವಾಗಿ ನೀಡಿದ್ಧಾರೆ.
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಇನ್ ವಿಟ್ರೊ ಫರ್ಟಿಲೈಸೇಶನ್ ಮತ್ತು ಭ್ರೂಣ ವರ್ಗಾವಣೆ ಮೂಲಕ ಪುಂಗನೂರಿನ ಕರು ಜನಿಸಿದೆ. 5 ಸಾವಿರದಿಂದ 10 ಸಾವಿರ ವೆಚ್ಚದಲ್ಲಿ ಭ್ರೂಣ ವರ್ಗಾವಣೆ ಮೂಲಕ ನಮಗೆ ಬೇಕಾದ ಜಾನುವಾರುಗಳ ಸಂತತಿಯನ್ನು ಮಾಡಿಸಿಕೊಳ್ಳಬಹುದು ಎಂದು ಎಂದು ಡಾ.ಪ್ರತಾಪ್ ಹೇಳಿದರು.