ಅಮರಾವತಿ: ಆಂಧ್ರಪ್ರದೇಶದ ಕಾಕಿನಾಡ ಬಳಿಯ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಕಾಕಿನಾಡದ ಹೊರವಲಯದಲ್ಲಿರುವ ವಕಾಲಪುಡಿ ಕೈಗಾರಿಕಾ ಪ್ರದೇಶದ ಪ್ಯಾರಿ ಶುಗರ್ ರಿಫೈನರಿಯಲ್ಲಿ ಈ ಘಟನೆ ನಡೆದಿದೆ.
ಸಕ್ಕರೆ ಚೀಲಗಳನ್ನು ಲೋಡ್ ಮಾಡುವಾಗ ಕನ್ವೇಯರ್ ಬೆಲ್ಟ್ ಗೆ ವಿದ್ಯುತ್ ಸಂಪರ್ಕವನ್ನು ನೀಡಲು ಕಾರ್ಮಿಕರು ಪ್ರಯತ್ನಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಫೋಟ ಸಂಭವಿಸಿದೆ.
ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರನ್ನು ಕಾಕಿನಾಡ ಜಿಲ್ಲೆಯ ನಿವಾಸಿಗಳಾದ ಆರ್.ವಿ.ವೆಂಕಟ ಸತ್ಯನಾರಾಯಣ (36) ಮತ್ತು ವಿ.ರಾಜೇಶ್ವರ್ ರಾವ್ (45) ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ಬಿ.ವಿ.ವೆಂಕಟ ರಮಣ (29) ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರು ಕಾಕಿನಾಡದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತರ ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.