ತಿರುಪತಿ: ವೆಂಕಟೇಶ್ವರನ ಸನ್ನಿಧಾನದ ಪರಿಸರದಲ್ಲಿ ಹಸಿರು ಸಂರಕ್ಷಣೆ ಭಾಗವಾಗಿ ತಿರುಪತಿ ತಿರುಮಲ ದೇವಾಲಯ(ಟಿಟಿಡಿ) ಬುಧವಾರದಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಲು ನಿರ್ಧರಿಸಿದೆ. ಪ್ಲಾಸ್ಟಿಕ್ ನಿಷೇಧದ ಕುರಿತಾಗಿ ಟಿಟಿಡಿ ಆಸ್ಥಾನದ ಮಂಟಪದಲ್ಲಿ ತಿರುಮಲ ಪ್ರದೇಶದಲ್ಲಿರುವ ಅಂಗಡಿ, ಹೋಟೆಲ್ ಮಾಲೀಕರೊಂದಿಗೆ ಸಭೆಯನ್ನು ಆಯೋಜಿಸಿ, ನಿರ್ಧಾರವನ್ನು ಕೈಗೊಂಡಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಟಿಡಿ ಎಸ್ಟೇಟ್ ವಿಭಾಗದ ಒಎಸ್ಡಿ ಮಲ್ಲಿಕಾರ್ಜುನ್, ದೇವಾಲಯದ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಕ್ಯಾರಿ ಬ್ಯಾಗ್, ಕವರ್, ಶಾಂಪೂ ಬಾಟಲಿಗಳು ಹೀಗೆ ಹಲವು ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಗಡಿ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ವ್ಯಾಪಾರಿಗಳು ಇನ್ನು ಮುಂದೆ ಪ್ಲಾಸ್ಟಿಕ್ ಕವರ್ ಬದಲಿಗೆ ಜೈವಿಕ ವಿಘಟನೆಗೊಳ್ಳುವ ಅಥವಾ ಪೇಪರ್ ಕವರ್ಗಳನ್ನು ಬಳಸಬೇಕು.
ಇದನ್ನು ಎಲ್ಲಾ ಹೋಟೆಲ್ ಹಾಗೂ ಮಠ ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ತಿರುಮಲಕ್ಕೆ ಬರುವ ಎಲ್ಲಾ ವಾಹನಗಳು ಹಾಗೂ ಜನರನ್ನು ಇನ್ನು ಮುಂದೆ ತಿರುಪತಿಯ ಚೆಕ್ಪೋಸ್ಟ್ನಲ್ಲಿ ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಅಂಗಡಿ ಹಾಗೂ ಹೋಟೆಲ್ಗಳಲ್ಲಿ ಎಸ್ಟೇಟ್ ಹಾಗೂ ಆರೋಗ್ಯಾಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಾರೆ. ಈ ವೇಳೆ ಯಾವುದೇ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಲ್ಲಿ, ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದರು.