ಗುಂಟೂರು : ಕಾರೊಂದು ಕೆರೆಗೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಯರ್ರಬಾಲೆಂ ತಿರುವುನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರನ್ನು ಸಾಯಿ, ಶ್ರೀನಿವಾಸ್, ನರೇಂದ್ರಕುಮಾರ್ ಹಾಗೂ ತೇಜರಾಮ್ಜಿ ಎಂದು ಗುರುತಿಸಲಾಗಿದೆ.
ಕಾರು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರಿನ ಗಾಜುಗಳನ್ನು ಒಡೆದು ಅದರೊಳಗಿದ್ದ ನಾಲ್ವರನ್ನು ಹೊರ ತೆಗೆದಿದ್ದಾರೆ. ಸಂಪೂರ್ಣ ನೀರು ತುಂಬಿದ್ದರಿಂದ ಅವರನ್ನು ಹೊರಕ್ಕೆ ತೆಗೆಯುವುದು ಬಹಳ ಕಷ್ಟವಾಯಿತು. ಹರಸಾಹಸಪಟ್ಟು ಹೊರಕ್ಕೆ ತೆಗೆದರೂ ಅದಾಗಲೇ ಎಲ್ಲರೂ ಮೃತಪಟ್ಟಿದ್ದರು.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಾಯಿ, ಶ್ರೀನಿವಾಸ್, ನರೇಂದ್ರ ಕುಮಾರ್ ಅವರು ಮಂಗಳಗಿರಿ ಮೂಲದವರಾಗಿದ್ದರೆ, ತೇಜರಾಮ್ಜಿ ಯರ್ರಬಾಲೆಂನವರು ಎನ್ನಲಾಗಿದೆ.