ನವದೆಹಲಿ: ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಅಧಿಕಾರಕ್ಕೆ ಬಂದ ಮರುಕ್ಷಣವೇ ಯುವಜನತೆಯ ಪಾಲಿಗೆ ಕಂಟಕವಾಗಿರುವ ಅಗ್ನಿಪಥ (ಅಗ್ನಿವೀರ) ಸೇನಾ ನೇಮಕಾತಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ನೆಮಕಾತಿ ಪದ್ಧತಿಯನ್ನು ಮರುಜಾರಿ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಸೋಮವಾರ ಘೋಷಿಸಿದ್ದಾರೆ.
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೂರೂ ಸೇನಾಪಡೆಗಳ ದಂಡನಾಯಕರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ‘ಯುವಜನರನ್ನು ತೊಂದರೆಗೆ ಸಿಲುಕಿಸುವ ಅಗ್ನಿಪಥ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕು. ಇದರಿಂದ ನಾಲ್ಕು ವರ್ಷಗಳ ಹೊರಬರುವ ಅಗ್ನಿವೀರರಿಗೆ ಮತ್ತೆ ಉದ್ಯೋಗ ಹುಡುಕುವುದು ಕಷ್ಟವಾಗುತ್ತದೆ. ಅಲ್ಲದೆ ಅಗ್ನಿಪಥ ಯೋಜನೆ ಘೋಷಣೆಗೂ ಮೊದಲು ಸೇನೆಗೆ ಆಯ್ಕೆಯಾಗಿದ್ದ 2 ಲಕ್ಷ ಮಂದಿಗೆ ಪ್ರಕ್ರಿಯೆಯನ್ನೇ ರದ್ದುಗೊಳಿಸಿರುವುದಾಗಿ ತಿಳಿಸಿ ಅತಂತ್ರಕ್ಕೆ ಸಿಲುಕಿಸಲಾಗಿದೆ. ಅವರಿಗೂ ಕೂಡಲೇ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
‘ಈ ಯೋಜನೆಗೆ ತಮ್ಮ ಸಹಮತವಿರಲಿಲ್ಲ ಎಂಬುದಾಗಿ ಮಾಜಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಜ। ಮನೋಜ್ ನರವಣೆ ಅವರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ರದ್ದುಗೊಳಿಸಬೇಕು’ ಎಂದು ತಿಳಿಸಿದರು.