ನಾಗ್ಪುರ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ವಿಜಯದಶಮಿಯ ಹಿನ್ನೆಲೆಯಲ್ಲಿ ನಾಗ್ಪುರದ ಕೇಂದ್ರ ಕಚೇರಿಯಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದು ಕಾಶ್ಮೀರದ ಬಗ್ಗೆ ಮಾತನಾಡಿದ್ದಾರೆ.
ಕಾಶ್ಮೀರದಲ್ಲಿ ಉಗ್ರರು ಭೀತಿ ಮೂಡಿಸುವುದಕ್ಕಾಗಿ ನಾಗರಿಕರ ಹತ್ಯೆಯನ್ನು ಪುನಾರಂಭ ಮಾಡಿದ್ದಾರೆ ಎಂದು ಹೇಳಿದ್ದು ಗಡಿಗಳಲ್ಲಿ ಸೇನಾ ಸನ್ನದ್ಧತೆಯನ್ನು ಹೆಚ್ಚಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಪರಿಸ್ಥಿತಿಯ ಬಗ್ಗೆಯೂ ಮೋಹನ್ ಭಾಗ್ವತ್ ಮಾತನಾಡಿದ್ದು, ಸಮಾಜದಲ್ಲಿ ಜಾತಿ ಮನಸ್ಥಿತಿ ಇನ್ನೂ ಇದ್ದು ಅದನ್ನು ಹೋಗಲಾಡಿಸುವತ್ತ ಆರ್ ಎಸ್ ಎಸ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ವಿಜಯದಶಮಿ ಆರ್ ಎಸ್ ಎಸ್ ನ ಸ್ಥಾಪನೆಯ ದಿನವಾಗಿದ್ದು ಪ್ರತಿ ವರ್ಷ ವಿಜಯದಶಮಿಯಂದು ಆರ್ ಎಸ್ ಎಸ್ ನ ಸರಸಂಘಚಾಲಕ್ ಸಂಘಟನೆಯನ್ನುದ್ದೇಶಿಸಿ ಮಾತನಾಡುವುದು ನಡೆದುಬಂದಿದೆ.
ಕಾಶ್ಮೀರದಲ್ಲಿ ಅ.12 ರಂದು ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿ ಐವರು ಸೇನಾ ಸಿಬ್ಬಂದಿಗಳು ಪೂಂಚ್ ಜಿಲ್ಲೆಯ ಡೇರಾ ಕೀ ಗಲಿ (ಡಿಕೆಜಿ)ಯಲ್ಲಿ ನಡೆದ ಉಗ್ರರೊಂದಿಗಿನ ಎನ್ ಕೌಂಟರ್ ನಲ್ಲಿ ಹತರಾಗಿದ್ದರು. ಇದಕ್ಕೂ ಮುನ್ನ ಆ.19 ರಂದು ಜೆಸಿಒ ಓರ್ವರು ರಜೌರಿ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತರಾಗಿದ್ದರು.