ಚಂಡೀಗಢ : ಲಖಿಂಪುರ ಹಿಂಸಾಚಾರದ ಕುರಿತು ಮಾತನಾಡಿರುವ ಕಾಂಗ್ರೆಸ್ ಪಂಜಾಬ್ ನಾಯಕ ನವಜೋತ್ ಸಿಂಗ್ ಸಿಧು ಉತ್ತರ ಪ್ರದೇಶದ ಸಿಎಂ ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರಬಾನಿಸಿದ್ದಾರೆ. ನಾಳೆಯೊಳಗೆ ಆರೋಪಿಗಳನ್ನು ಬಂಧನ ಮಾಡದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ನ್ಯಾಯಕ್ಕಾಗಿ ಪ್ರಾಣ ಹೋದ್ರು ಚಿಂತೆ ಇಲ್ಲ. ಕೊನೆಯ ಕ್ಷಣದವರೆಗೆ ಹೋರಾಟ ನಡೆಯಲಿದೆ. ನನ್ನ ತಂದೆ ಮತ್ತು ಅಜ್ಜ ರೈತರು. ಅನ್ನದಾತರಿಗಾಗಿ ನಮ್ಮ ಪ್ರಾಣ ಕೊಡಲು ನಾನು ಸಿದ್ಧ. ಈ ನಿರ್ಧಾರದಿಂದ ಒಂದು ಅಡಿಯೂ ಹಿಂದೆ ಸರಿಯಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ರೈತರ ಮೇಲೆ ಹಿಂದಿನಿಂದ ದಾಳಿ ನಡೆಸಿ ಕೊಲ್ಲಲಾಗಿದೆ. ಎಫ್ಐಆರ್ ದಾಖಲಾದ್ರೂ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಿಚಾರಣೆಗೆ ಹಾಜರಾಗಿಲ್ಲ ಏಕೆ? ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಏಕೆ ಎಂದು ಸಿಧು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸಚಿವ ಮತ್ತು ಅವರ ಪುತ್ರ ಸಂವಿಧಾನಕ್ಕಿಂತ ದೊಡ್ಡವರೇನು ಎಂದು ಕಿಡಿಕಾರಿದರು. ಸದ್ಯ ಸಿಧು ನೇತೃತ್ವದ ತಂಡ ಉತ್ತರ ಪ್ರದೇಶ ಗಡಿಯತ್ತ ಹೊರಟಿದೆ. ಸೋಮವಾರವೇ ಸಿಧು ಪಂಜಾಬ್ ನಿಂದ ಲಖಿಂಪುರ ಖೇರಿವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಮಾತುಗಳನ್ನಾಡಿದ್ದರು.