ಬಿಜೆಪಿ ಇನ್ನೂ ದೇಶದಲ್ಲಿ ದಶಕಗಳ ಕಾಲ ಬಲಿಷ್ಠ ಶಕ್ತಿಯಾಗಿಯೇ ಉಳಿಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಲ ಕ್ಷೀಣಿಸಲಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭ್ರಮೆಯಲ್ಲಿದ್ದಾರೆ ಎಂಬುದಾಗಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸದ್ಯ ಗೋವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್ಗೆ ನೆಲೆಯೂರಲು ಸಹಾಯ ಯತ್ನದಲ್ಲಿರುವ ಪ್ರಶಾಂತ್ ಕಿಶೋರ್ ಅವರು, ಬಿಜೆಪಿ ಇನ್ನೂ ದಶಕಗಳ ಕಾಲ ಭಾರತೀಯ ರಾಜಕೀಯ ರಂಗದಲ್ಲಿ ಬಲಿಷ್ಠ ಶಕ್ತಿಯಾಗಿ ಉಳಿಯಲಿದೆ.ಬಿಜೆಪಿ “ಹಲವು ದಶಕಗಳ “ಕಾಲ ಪ್ರಬಲವಾಗಿ ಹೋರಾಟ ನಡೆಸಲಿದೆ ಎಂಬುದಾಗಿ ಅವರು ಹೇಳಿದರು.
ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐಪಿಎಸಿ) ಎಂಬ ಚುನಾವಣಾ ಕನ್ಸಲ್ಟೆನ್ಸಿ ಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರಶಾಂತ್ ಕಿಶೋರ್ ಅವರು ಪ್ರಕೃತ ಟಿಎಂಸಿ ಪರ ಕೆಲಸ ಮಾಡುತ್ತಿದ್ದಾರೆ.ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಪ್ರಶಾಂತ್ ಕಿಶೋರ್ ಅವರ ಪಾತ್ರ ಇದೆ ಎನ್ನಲಾಗಿದೆ.
ಈ ಹಿಂದೆ ಕಾಂಗ್ರೆಸ್ 40 ವರ್ಷಗಳ ಕಾಲ ಸೋಲು-ಗೆಲುವಿನ ಹೊರತಾಗಿಯೂ ಹೇಗೆ ಹಿಡಿತ ಕಾಯ್ದುಕೊಂಡು ಬಂದಿತ್ತೋ ಅದೇ ರೀತಿ, ಈಗ ಬಿಜೆಪಿ ಚುನಾವಣೆಯಲ್ಲಿ ಸೋಲು-ಗೆಲುವುಗಳ ಹೊರತಾಗಿಯೂ ದಶಕಗಳ ಕಾಲ ಪ್ರಬಲವಾಗಿ ಮುಂದುವರಿಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಾರಿ ಶೇ.30೦ರಷ್ಟು ಮತಗಳನ್ನು ಕಾಯ್ದುಕೊಂಡದ್ದೇ ಆದಲ್ಲಿ ಅಂತಹ ಪಕ್ಷ ಅಷ್ಟು ಸುಲಭದಲ್ಲಿ ದುರ್ಬಲವಾಗಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಪ್ರಧಾನಿ ಮೋದಿಯವರ ಬಲ ಕ್ಷೀಣಿಸುತ್ತಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನರು ಸಿಟ್ಟಾಗಿ ಮೋದಿ ಅವರನ್ನು ಕಿತ್ತೆಸೆಯಲಿದ್ದಾರೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ಒಂದು ವೇಳೆ ಮೋದಿಯವರನ್ನು ಇಳಿಸಿದರೂ ಬಿಜೆಪಿಯನ್ನು ದುರ್ಬಲಗೊಳಿಸಲು ಅಷ್ಟು ಸುಲಭವಿಲ್ಲ. ಬದಲಿಗೆ ಬಿಜೆಪಿ ಅನೇಕ ದಶಕಗಳ ಕಾಲ ಪ್ರಬಲ ಶಕ್ತಿಯಾಗಿ ಮುಂದುವರಿಯುತ್ತದೆ ಎಂಬುದಾಗಿ ಅವರು ಮ್ಯೂಸಿಯಂ ಗೋವಾದಲ್ಲಿ ನಡೆದ ಸಂವಾದವೊಂದರಲ್ಲಿ ನುಡಿದರು.
ರಾಹುಲ್ ಗಾಂಧಿ ಒಂದು ಸುಳ್ಳು ಭ್ರಮೆಯಲ್ಲಿದ್ದಾರೆ.
ದೇಶದಲ್ಲಿ ಆಡಳಿತ ವಿರೋಧಿ ಭಾವನೆ ಇದೆ.ಜನರು ಮೋದಿಯವರನ್ನು ಕಿತ್ತೆಸೆಯುತ್ತಾರೆ. ಅನಂತರ ಯಾವುದೇ ಸಮಸ್ಯೆಯಾಗದು ಎಂದು ಅವರು ಯೋಚನೆಯಲ್ಲಿರುವಂತಿದೆ. ಇದು ಕೇವಲ ಅವರು ಮಾತ್ರವಲ್ಲ, ನೀವು ಯಾವುದೇ ಕಾಂಗ್ರೆಸ್ ನಾಯಕರನ್ನು ಅವರು ರಾಷ್ಟ್ರೀಯ , ರಾಜ್ಯ ಮತ್ತು ಸ್ಥಳೀಯ ನಾಯಕರಿರಲಿ,ಕೇಳಿನೋಡಿ. ಅವರು ಕೂಡಾ ಇದೇ ಅಭಿಪ್ರಾಯ ಮಂಡಿಸುತ್ತಾರೆ. ಮೋದಿಯನ್ನು ಜನ ಸೋಲಿಸಲಿದ್ದಾರೆ ಎಂದು ಅವರು ಕಾಯುತ್ತಿದ್ದಾರೆ. ಆದರೆ ಅದು ಸಂಭವಿಸದು ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ತೈಲ ಬೆಲೆ ಏರಿಕೆಯಾಗಿದ್ದರೂ, ಜನತೆ ಮೋದಿ ವಿರೋಧಿ ಭಾವನೆ ತಳೆದಿಲ್ಲ ಎಂಬುದನ್ನು ಅವರು ಉದಾಹರಿಸಿದರು. ಕೋವಿಡ್ ಬಿಕ್ಕಟ್ಟು,ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಿಂದಾಗಿ ಅನಿವಾರ್ಯವಾಗಿ ತೈಲ ಬೆಲೆ ಏರಿಕೆಯಾಗಿರುವುದನ್ನು ಜನ ಮನಗಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಬಗ್ಗೆ ಎಷ್ಟೇ ಪ್ರಚಾರ ನಡೆಸಿದರೂ ಜನ ಪ್ರಭಾವಿತರಾಗುತ್ತಿಲ್ಲ ಎಂಬುದಿಲ್ಲಿ ಉಲ್ಲೇಖನೀಯ.