ಶ್ರೀನಗರ: ಲಷ್ಕರ್–ಇ–ತಯಬಾ ಉಗ್ರರು ಬಿಜೆಪಿ ಮುಖಂಡ ಮತ್ತು ಅವರ ಪತ್ನಿಯನ್ನು ಗುಂಡಿಕ್ಕಿ ಕೊಂದ ಘಟನೆ ಅನಂತ್ನಾಗ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಗುಲಾಮ್ ರಸೂಲ್ ದಾರ್ ಮತ್ತು ಅವರ ಪತ್ನಿ ಜವ್ಹಾರಾ ಬೇಗಂ ಇಬ್ಬರೂ ಬಿಜೆಪಿ ಸರಪಂಚರಾಗಿದ್ದರು. ರಸೂಲ್ ಕುಲ್ಗಾಮ್ ಜಿಲ್ಲೆಯ ಕಿಸಾನ್ ಮೋರ್ಚಾದ ಜಿಲ್ಲಾ ಅಧ್ಯಕ್ಷರೂ ಆಗಿದ್ದರು. ಇಬ್ಬರೂ ಅನಂತ್ನಾಗ್ ಪಟ್ಟಣದ ಲಾಲ್ ಚೌಕ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಮಧ್ಯಾಹ್ನ 4 ಗಂಟೆಗೆ ಬೈಕ್ನಲ್ಲಿ ಬಂದ ಇಬ್ಬರು ಉಗ್ರರು ಅವರ ಮನೆಗೆ ನುಗ್ಗಿ, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಮೂಲಕ ಈ ವರ್ಷ ಕಾಶ್ಮೀರದಲ್ಲಿ ಮೃತಪಟ್ಟ ಬಿಜೆಪಿ ಸದಸ್ಯರ ಸಂಖ್ಯೆ ಐದಕ್ಕೆ ಏರಿದೆ.