ಹೊಸದಿಲ್ಲಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೊಸದಿಲ್ಲಿಯಲ್ಲಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಹೊಸದಿಲ್ಲಿ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆಯಿತು. ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿಗಳು ಅತೀವ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿಯವರು ಶ್ರೀವಿಶ್ವೇಶತೀರ್ಥರನ್ನು ವಿಶೇಷವಾಗಿ ಸ್ಮರಿಸಿದರು. ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಈರ್ವರೂ ಸಮಾಲೋಚನೆಗೈದರು.
ಪ್ರಧಾನಿ ನರೇಂದ್ರ ನೋದಿ ಅವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಜರತಾರಿ ಶಾಲು, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಶ್ರೀಕೃಷ್ಣನ ಗಂಧ , ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು. ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ಅವರು ರಚಿಸಿದ ಮೋದಿ ಅವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದವಾದ ತೈಲಚಿತ್ರ ಹಾಗೂ ಸಂಸ್ಕೃತ , ಕನ್ನಡ , ತುಳು ಲಿಪಿಗಳಲ್ಲಿ ನರೇಂದ್ರ ಮೋದಿ ಅವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಯವರಿಗೆ ನೀಡಿದರು.
ಕೃಷ್ಣ ದರ್ಶನಕ್ಕೆ ಆಗಮಿಸಲು ಆಹ್ವಾನ:
ಈ (ಪ್ರಧಾನ ಮಂತ್ರಿ ಅಧಿಕಾರದ) ಅವಧಿಯಲ್ಲೇ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಆಹ್ವಾನಿಸಿದರು. ಖಂಡಿತ ಬಂದೇ ಬರುತ್ತೇನೆ ಚಿಂತೆ ಬೇಡ ಎಂದು ಮೋದಿಯವರು ತುಂಬ ಹರ್ಷದಿಂದಲೇ ತಿಳಿಸಿದರು.
ಇದೇ ಸಂದರ್ಭದಲ್ಲಿ ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುವುದು, ದೇಶಾದ್ಯಂತ ಹಿಂದು ಶ್ರದ್ಧಾ ಕೇಂದ್ರಗಳನ್ನು ಸರಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು, ಮಹರ್ಷಿ ವೇದವ್ಯಾಸರ ಜಯಂತಿಯನ್ನು (ಆಷಾಢ ಪೂರ್ಣಿಮಾ ಅಥವಾ ಒಂದು ನಿರ್ದಿಷ್ಟ ದಿನಾಂಕವನ್ನು) ತತ್ತ್ವಜ್ಞಾನ ದಿನ ಅಥವಾ ಅಧ್ಯಾತ್ಮ ದಿನ ಎಂದು ಘೋಷಿಸಿ ಸರಕಾರಿ ಆಚರಣೆಗೆ ವ್ಯವಸ್ಥೆಗೊಳಿಸುವುದು ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವುದು ಎಂಬ ನಾಲ್ಕು ಅಪೇಕ್ಷೆಗಳನ್ನು ಲಿಖಿತವಾಗಿ ನೀಡಿದರು.
ಈ ಬಗ್ಗೆಯೂ ಗಮನಹರಿಸುವುದಾಗಿ ಪ್ರಧಾನಿ ಮೋದಿ ಅವರು ತಿಳಿಸಿದರು. ಈ ವೇಳೆ ಪೇಜಾವರ ಮಠದ ದಿವಾನ ಎಂ. ರಘು ರಾಮಾಚಾರ್ಯ, ಶ್ರೀಗಳ ಕಾರ್ಯದರ್ಶಿ ಡಿ.ಪಿ. ಅನಂತ್, ಸಾಮಾಜಿಕ ಕಾರ್ಯಕರ್ತ ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.