ನಗರ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ದೇಶಾದ್ಯಂತ 400 ‘ನಗರ ಅರಣ್ಯ’ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ರೂಪಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿಯೂ ಸಣ್ಣದಾದ ನಗರ ವನವನ್ನು ಅಭಿವೃದ್ಧಿಪಡಿಸುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿಯೂ ಪರಿಸರ ಸ್ನೇಹಿ ಭಾವನೆ ರೂಢಿಸುವುದು ಅತ್ಯಾವಶ್ಯಕವಾಗಿದ್ದು, ಇದರ ಸಲುವಾಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ನರ್ಸರಿಗಳನ್ನು ಸ್ಥಾಪಿಸಲಾಗುವುದು.
ಅಷ್ಟೇ ಅಲ್ಲದೆ ಅರಣ್ಯಗಳ ಅಭಿವೃದ್ಧಿ ಮತ್ತು ರಕ್ಷಣೆ ಖಾತ್ರಿಗೆ, ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಉದಾರೀಕೃತ ನೀತಿಯನ್ನು ರೂಪಿಸಲು ಕೇಂದ್ರ ಆಲೋಚಿಸುತ್ತಿದೆ ಎಂದಿದ್ದಾರೆ.