ಭಾರತವು ಗಡಿಗಳಲ್ಲಿ ಸುರಕ್ಷಿತವಾಗಿದ್ದು ಆಂತರಿಕ ಅಭಿವೃದ್ಧಿ ಸಾಧಿಸಿ ವಿಶ್ವದ ಕಣ್ಣುಗಳಲ್ಲಿ ತನ್ನ ಪ್ರತಿಷ್ಟೆ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗಿರುವುದರಲ್ಲಿ ಗಡಿ ಭದ್ರತಾ ಪಡೆಯ (ಬಿ ಎಸ್ ಎಫ್) ಕೊಡುಗೆ ಅನನ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಂಡಾಡಿದ್ದಾರೆ.
ಅವರು ಭಾನುವಾರ ಗುಜರಾತಿನ ನಡಾಬೆತ್ ಮತ್ತು ಬಾಣಸ್ಕಾಂತ ಜಿಲ್ಲೆಗಳ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿರೇಖೆಯ ವಿಚಕ್ಷಣಾ ಕೇಂದ್ರಗಳ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.
“ದೇಶದ ಎದುರು ಸವಾಲುಗಳು ಎದ್ದಾಗ ಅದನ್ನು ಎದುರಿಸುವಲ್ಲಿ, ಶೌರ್ಯ ಮೆರೆಯುವಲ್ಲಿ ಬಿ ಎಸ್ ಎಫ್ ಯಾವತ್ತೂ ಹಿಂದೆ ಬಿದ್ದಿಲ್ಲ. ಅದರ ಪರಿಣಾಮವೇ 1 ಮಹಾವೀರ ಚಕ್ರ, ನಾಲ್ಕು ಕೀರ್ತಿ ಚಕ್ರ, 13 ವೀರ ಚಕ್ರ, 13 ಶೌರ್ಯ ಚಕ್ರಗಳನ್ನು ಪಡೆದಿದೆ. ದೇಶ ನಿಮ್ಮ ಬಗ್ಗೆ ಹೆಮ್ಮೆ ಹೊಂದಿದೆ. ಮನೆಯಿಂದ ದೂರವಿದ್ದು, ಮರುಭೂಮಿಯ ಸುಡುಬಿಸಿಲಿನಲ್ಲೂ ಕರ್ತವ್ಯ ನಿರ್ವಹಿಸುವ ನಿಮ್ಮ ಸೇವೆ ಅನುಪಮವಾದದ್ದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.