ಬೆಂಗಳೂರು, ;ಬರುವ ದಿನಗಳಲ್ಲಿ ದೇಶದ ಪ್ರತಿಯೊಂದು ಹಳ್ಳಿಗಳಿಗೂ ಇಂಟರ್ನೆಟ್ ಸೌಲಭ್ಯವನ್ನು ತಲುಪಿಸುವುದು ತಮ್ಮ ಮುಂದಿನ ಗುರಿಯಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದೇಶದ 5 ಸಾವಿರ ಗ್ರಾಮಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲು ಕೇಬಲ್ ಅಳವಡಿಸುವ ಕಾರ್ಯ ಆರಂಭವಾಗಿದೆ. ಪ್ರತಿಯೊಂದು ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯ ಒದಗಿಸಿ ಸಂಹವನ ಕ್ರಾಂತಿಯನ್ನು ಸೃಷ್ಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ದೇಶದಲ್ಲಿರುವ ಪ್ರತಿಯೊಂದು ಗ್ರಾಮಗಳಿಗೂ ಮೂಲಭೂತ ಸೌಕರ್ಯ, ವಿದ್ಯುತ್, ಇಂಟರ್ನೆಟ್ ಕಲ್ಪಿಸಿಕೊಡುವುದು ಪ್ರಧಾನಿಗಳ ಕನಸಾಗಿದೆ. ಅದನ್ನು ನನಸು ಮಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಹುಬ್ಬಳ್ಳಿ- ಧಾರವಾಡದಲ್ಲಿ ಆರಂಭವಾದ ಯಾತ್ರೆಯಲ್ಲಿ ನಾನು 700 ಕಿಮೀನಷ್ಟು ಕ್ರಮಿಸಿದ್ದೇನೆ. ಇಂದು ಜನಾಶೀರ್ವಾದ ಯಾತ್ರೆಯ ನಾಲ್ಕನೇ ದಿನ. ನೆನ್ನೆ ರಾತ್ರಿಯೇ ನಾನು ನಮ್ಮ ಬೆಂಗಳೂರಿಗೆ ಬಂದೆ ಎಂದು ಹೇಳಿದರು.
ಕಳೆದ ಜುಲೈನಲ್ಲಿ ನಾನು ದೆಹಲಿಗೆ ಹೋಗಿದ್ದೆ. ಅಂದು ಸಚಿವನಾಗುತ್ತೇನೆ ಅಂದುಕೊಂಡಿರಲಿಲ್ಲ. ನರೇಂದ್ರ ಮೋದಿ ಅವರ ಟೀಂನಲ್ಲಿ ಸ್ಥಾನ ಸಿಕ್ಕಿರುವುದು ನಿಜಕ್ಕೂ ಗೌರವದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಹೊಸ ಭಾರತದ ಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಗೂಡಿರುವುದು ಹೆಮ್ಮೆಯ ವಿಚಾರ. ಕೌಶಲ್ಯಾಭಿವೃದ್ದಿ, ಐಟಿ, ಎಲೆಕ್ಟ್ರಾನಿಕ್ ಖಾತೆ ನಮ್ಮ ಕರ್ನಾಟಕಕ್ಕೆ ಬಹಳ ಮುಖ್ಯ ಎಂದರು.