ಕೊರೋನಾದಿಂದ ಚೇತರಿಸಿಕೊಂಡ ನಂತರ ಐದು ರೋಗಿಗಳಲ್ಲಿ ಪಿತ್ತಕೋಶದ ಗ್ಯಾಂಗ್ರೀನ್ ಕಂಡುಬಂದಿರುವ ಕುರಿತು ವರದಿ ಬಂದಿದೆ. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಇಂತಹ ಪ್ರಕರಣಗಳ ಮೊದಲ ವರದಿ ಮಾಡಿದ್ದು, ಇದು ವೈದ್ಯರಿಗೆ ಹೊಸ ಸವಾಲಾಗಿದೆ.
ಜೂನ್ ಮತ್ತು ಆಗಸ್ಟ್ ನಡುವೆ ಐದು ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಈ ಐವರಲ್ಲಿ ಇದೀಗ ಪಿತ್ತಕೋಶದ ಗ್ಯಾಂಗ್ರೀನ್ ಕಂಡುಬಂದಿದೆ ಎಂದು ಹೇಳಲಾಗಿದೆ. ಈ ಐದು ರೋಗಿಗಳ ಪೈಕಿ ನಾಲ್ಕು ಪುರುಷರು ಮತ್ತು ಮಹಿಳೆಯರು ಸೇರಿದ್ದು, ಇವರೆಲ್ಲರ ವಯಸ್ಸು 37 ರಿಂದ 75 ರ ನಡುವೆ ಇದೆ ಎನ್ನಲಾಗಿದೆ.
ಈ ಎಲ್ಲಾ ರೋಗಿಗಳು ಜ್ವರ, ಹೊಟ್ಟೆಯ ಬಲ ಮೇಲ್ಭಾಗದ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದರು. ಈ ಪೈಕಿ ಇಬ್ಬರು ಮಧುಮೇಹ ಮತ್ತು ಒಬ್ಬರು ಹೃದ್ರೋಗದಿಂದ ಬಳಲುತ್ತಿದ್ದರು. ಕೋವಿಡ್-19 ರೋಗಲಕ್ಷಣಗಳ ನಿರ್ವಹಣೆಗಾಗಿ ಮೂವರು ರೋಗಿಗಳು ಸ್ಟಿರಾಯ್ಡ್ಗಳನ್ನು ಪಡೆದಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಯಕೃತ್ತಿನ ಸಂಸ್ಥೆ, ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊಬಿಲಿಯರಿ ಸೈನ್ಸಸ್ನ ಅಧ್ಯಕ್ಷ ಡಾ.ಅನಿಲ್ ಅರೋರಾ ಅವರು,ನಾವು ಜೂನ್ ಮತ್ತು ಆಗಸ್ಟ್ ನಡುವೆ ಇಂತಹ ಐದು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇವೆ. ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ, ಈ ರೋಗಿಗಳಿಗೆ ಪಿತ್ತಕೋಶದಲ್ಲಿ ತೀವ್ರವಾದ ಪಿತ್ತಕೋಶದ ಉರಿಯೂತ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಪಿತ್ತಕೋಶದ ಗ್ಯಾಂಗ್ರೀನ್ಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಹೇಳಿದರು.
ಕೇವಲ 10 ಪ್ರತಿಶತದಷ್ಟು ರೋಗಿಗಳು ಪಿತ್ತಕೋಶದ ಕಲ್ಲು ಅಥವಾ ಸಿಸ್ಟಿಕ್ ಡಕ್ಟ್ ತೊಂದರೆಯ ಪುರಾವೆಗಳಿಲ್ಲದೆ ಪಿತ್ತಕೋಶದ ಉರಿಯೂತವಾಗಿರುವ ‘ಅಕಾಲಕ್ಯುಲಸ್ ಕೊಲೆಸಿಸ್ಟೈಟಿಸ್’ ಅನ್ನು ಹೊಂದಿದ್ದಾರೆ. ಕೋವಿಡ್ -19 ರೋಗಲಕ್ಷಣಗಳು ಮತ್ತು ‘ಅಕಾಲ್ಕುಲಸ್ ಕೊಲೆಸಿಸ್ಟೈಟಿಸ್’ ನ ರೋಗನಿರ್ಣಯದ ನಡುವಿನ ಸರಾಸರಿ ಅವಧಿ ಎರಡು ತಿಂಗಳುಗಳಾಗಿದ್ದು, ಅಲ್ಟ್ರಾಸೌಂಡ್ ಮತ್ತು ಹೊಟ್ಟೆಯ CT ಸ್ಕ್ಯಾನ್ ಮೂಲಕ ರೋಗನಿರ್ಣಯವನ್ನು ದೃಢಪಡಿಸಬಹುದಾಗಿದೆ. ಈ ಎಲ್ಲಾ ರೋಗಿಗಳಿಗೆ ಯಶಸ್ವಿಯಾಗಿ ಲ್ಯಾಪ್ರೊಸ್ಕೋಪಿಕ್ ನೆಕ್ರೋಟಿಕ್ ಮೂಲಕ ಸೋಂಕಿತ ಪಿತ್ತಕೋಶವನ್ನು ತೆಗೆಯಲಾಗಿದೆ ಎಂದು ಹೇಳಿದರು.
‘ಪಿತ್ತಕೋಶದ ಎಪಿಥೇಲಿಯಲ್ ಕೋಶಗಳು ಪಿತ್ತರಸ ನಾಳದ ಕೋಶಗಳಿಗೆ ಹೋಲುತ್ತವೆ. SARS-CoV-2 ಅಥವಾ ವೈರಸ್ ವಿರುದ್ಧ ದೇಹದ ಅನಿಯಂತ್ರಿತ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಇದು ಗುರಿಯಾಗಬಹುದು. ಪಿತ್ತಕೋಶದ ತೀವ್ರವಾದ ಉರಿಯೂತಕ್ಕೂ ಇದು ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದರು.
ಪಿತ್ತಕೋಶದ ಕಲ್ಲಿನ ಸಮಸ್ಯೆಯು ಉತ್ತರ ಭಾರತದಲ್ಲಿ (ಸಾಮಾನ್ಯ ಜನಸಂಖ್ಯೆಯ ಶೇ.8ರಷ್ಟು) ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಕೊಲೆಸಿಸ್ಟೈಟಿಸ್ ಎಂದು ಕರೆಯಲ್ಪಡುವ ತೀವ್ರವಾದ ಉರಿಯೂತದ ಶೇ.90 ರಷ್ಟು ಪ್ರಕರಣಗಳಿಗೆ ಕಾರಣವಾಗಿದೆ.