ಅಮೃತಸರ: ಅಮೃತಸರ- ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಕಾರು ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಜಮ್ಮು ಮೂಲದ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10 ಮಕ್ಕಳು ಗಾಯಗೊಂಡಿದ್ದಾರೆ.
ಖಾಸಗಿ ಶಾಲೆಯ ಬಸ್ ಸೋಹಿಯಾ ಗ್ರಾಮದ ಬಳಿ ಹೆದ್ದಾರಿಗೆ ಬಂದು ಸೇರಿಕೊಳ್ಳುತ್ತಿತ್ತು. ಆದರೆ, ಬಸ್ ಚಾಲಕ ಕಾರು ಹಿಂದಿನಿಂದ ಬರುತ್ತಿರುವುದನ್ನು ಗಮನಿಸದ ಹಿನ್ನೆಲೆಯಲ್ಲಿ ಕಾರು ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಬಸ್ಸಿಗೆ ಡಿಕ್ಕಿ ಹೊಡೆದಾಗ, ಅದರ ಹಿಂದೆ ಬರುತ್ತಿದ್ದ ಮರಳು ತುಂಬಿದ ಟ್ರಕ್ ಚಾಲಕ ಬಲವಾಗಿ ಬ್ರೇಕ್ ಹಾಕಿದ್ದಾರೆ. ಆದರೆ, ವಾಹನ ಸ್ಕಿಡ್ ಆಗಿ ಉರುಳಿಬಿದ್ದು ಟ್ರಕ್ ಚಾಲಕ ಗಾಯಗೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಸ್ ಚಾಲಕ ಸಹ ಗಾಯಗೊಂಡಿದ್ದು, ಮಕ್ಕಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.