ರಾಯಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಂಕೇ ಜಿಲ್ಲೆಯ ಭಾನುಪ್ರತಾಪಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಕುರಿತು ನರೇಂದ್ರ ಮೋದಿ ಅವರಿಗೆ ಕಾಳಜಿ ಇದ್ದಿದ್ದೇ ಆದರೆ, ಜಾತಿ ಜನಗಣತಿಗೆ ಇಷ್ಟೇಕೆ ಭಯಪಡುತ್ತಿದ್ದಾರೆ’ ಎಂದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶ ವ್ಯಾಪಿ ಜಾತಿ ಜನಗಣತಿ ನಡೆಸಲಾಗುವುದು. ಛತ್ತೀಸಗಢದಲ್ಲಿ ಇದನ್ನು ಈಗಲೇ ನಡೆಸುತ್ತೇವೆ’ ಎಂದು ವಾಗ್ದಾನ ಮಾಡಿದರು. ಕಾಂಗೆಸ್ ಅಧಿಕಾರಕ್ಕೇರಿದಲ್ಲಿ ಬೀಡಿ ಎಲೆ ಸಂಗ್ರಹಕಾರರಿಗೆ ವಾರ್ಷಿಕ 14 ಸಾವಿರ ಸಹಾಯಧನ ನೀಡಲಾಗುವುದು’ ಎಂದುಹೇಳಿದರು.
ಬಿಜೆಪಿ ನಾಯಕರು ಆದಿವಾಸಿಗಳನ್ನು ವನವಾಸಿಗಳು ಎಂದು ಕರೆಯುವ ಮೂಲಕ ಇಡೀ ಸಮುದಾಯವನ್ನೇ ಅವಮಾನ ಮಾಡಿದ್ದಾರೆ. ಅವರ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.