ಟೊರಂಟೊ: ಭಾರತ ಕೆನಡಾ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ಜಿ. 20 ಸಮ್ಮೇಳನ ಬಳಿಕ ಕೆನಡಾ ಪ್ರಧಾನಿ ಭಾರತದ ವಿರುದ್ಧ ಮಿಥ್ಯಾರೋಪ ಮಾಡಿದ ಬಳಿಕವಂತೂ ಇದು ಇನ್ನಷ್ಟು ಬಿರುಕಿಗೆ ಕಾರಣವಾಗಿದೆ.
ಈ ನಡುವೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶದಲ್ಲಿ ಮೈಲೇಜ್ ಪಡೆಯಲು ಮುಂದಾಗಿದ್ದ ಕೆನಡಾ ಪ್ರಧಾನಿಗೆ ಇದೀಗ ಸ್ವದೇಶದಲ್ಲೇ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ನಿಜ್ಜರ್ ವಿಷಯದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲೇ ಈ ಕುರಿತು ಬಹಿರಂಗ ಟೀಕೆ ಮಾಡಿದ ಜಸ್ಟಿನ್ ವರ್ತನೆಯನ್ನು ಕೆನಡಾದ ಮಾಧ್ಯಮಗಳು ಟೀಕಿಸಿವೆ. ಜೊತೆಗೆ ಅಲ್ಲಿನ ವಿಪಕ್ಷಗಳು ಕೂಡಾ, ಇಂಥದ್ದೊಂದು ಆರೋಪಕ್ಕೆ ಪ್ರಧಾನಿ ಸೂಕ್ತ ಸಾಕ್ಷ್ಯ ನೀಡದ ಹೊರತೂ ನಾವು ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿವೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಶುಕ್ರವಾರ ಮತ್ತೊಮ್ಮೆ ಆರೋಪ ಮಾಡಿರುವ ಟ್ರುಡೋ, ತಮ್ಮ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯ ನೀಡಲಾಗದೆ ಟೀಕೆಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆಯೇ ಭಾರತದ ಮೇಲಿನ ಟೀಕೆ ಬೆನ್ನಲ್ಲೇ ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ತೆರಳಿದ್ದ ಟ್ರುಡೋ ಅಲ್ಲಿ ಹಲವು ದೇಶಗಳ ಮುಂದೆ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದರೂ ಯಾವುದೇ ದೇಶಗಳೂ ಅದಕ್ಕೆ ಸೊಪ್ಪು ಹಾಕಿಲ್ಲ ಎಂದು ಎನ್ನಲಾಗಿದೆ.