ಭೋಪಾಲ್‌: ಮಧ್ಯಪ್ರದೇಶದ ಶಾಸಕ ಯೋಗೇಂದ್ರ ಸಿಂಗ್ ಬಾಬಾ ಪ್ರಯಾಣಿಸುತ್ತಿದ್ದ ಕಾರು ಶಾಲೆಯ ಗೋಡೆಗೆ ಡಿಕ್ಕಿಯಾಗಿ ಹೊತ್ತಿ ಉರಿದಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಸಿಯೋನಿ ಬಂಜಾರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಶಾಸಕರು ಜಬಲ್ಪುರದಿಂದ ತಮ್ಮ ಹುಟ್ಟೂರು ಘುರ್ವಾಡಾಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾರು ಅಪಘಾತ ನಡೆದಿದೆ. ಕಾರಲ್ಲಿ ಬಾಬಾ, ಅವರ ಗನ್‌ಮ್ಯಾನ್ ರಾಜು ಧ್ರುವೆ ಮತ್ತು ಚಾಲಕ ಇದ್ದರು ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಎಸ್‌ಯುವಿಯ ಬಾಗಿಲುಗಳು ಲಾಕ್ ಆಗಿದ್ದವು. ಅಲ್ಲದೇ ಡಿಕ್ಕಿಯಾಗುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಶಾಸಕರು ಮತ್ತು ಅವರ ಗನ್‌ಮ್ಯಾನ್‌ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರನ್ನು ಲಖ್ನಾದೋನ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಮೂವರು ಸುರಕ್ಷಿತರಾಗಿದ್ದಾರೆ. ಚಾಲಕನ ತುಟಿಗೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಮೂವರನ್ನು ಆಸ್ಪತ್ರೆಯಿಂದ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.