ಬಾಂಗ್ಲಾದೇಶ: ಮೀಸಲಾತಿ ವಿಚಾರದಲ್ಲಿ ಬಾಂಗ್ಲಾದೇಶದಲ್ಲಿ ಕೋಲಾಹಲ ಉಂಟಾಗಿದೆ. ನಿನ್ನೆ ನಡೆದ ಘೋರ ಹಿಂಸಾಚಾರದಲ್ಲಿ ಒಟ್ಟು 39 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರದಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಆಗಿದ್ದಾರೆ.
ಮೀಸಲಾತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 39 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ ಢಾಕಾ, ಚಟ್ಟೊಗ್ರಾಮ್, ರಂಗ್ಪುರ್ ಮತ್ತು ಕುಮಿಲ್ಲಾದಲ್ಲಿ ಭಾರೀ ಹಿಂಸಾಚಾರ ನಡೆದಿದೆ.
ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ.. ಕಳೆದೆರಡು ದಿನಗಳ ಹಿಂದೆ ಸಂಜೆ ಢಾಕಾದಲ್ಲಿ ದೊಡ್ಡ ಮೊಟ್ಟದಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಆಗ 6 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದನ್ನು ಖಂಡಿಸಿ ನಿನ್ನೆ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆ ನಡೆದಿದ್ದು, ದುರಂತಗಳು ಸಂಭವಿಸಿವೆ.
1971ರ ಯುದ್ಧದಲ್ಲಿ ಹೋರಾಡಿದ್ದ ಸೈನಿಕರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಇರುವ ಮೀಸಲಾತಿ ರದ್ದುಗೊಳಿಸಬೇಕೆಂಬುವುದು ಅಲ್ಲಿನ ವಿದ್ಯಾರ್ಥಿಗಳ ಒತ್ತಾಯ. ಒಂದು ವಾರದ ಹಿಂದೆ ಸುಪ್ರೀಂ ಕೋರ್ಟ್ ಈ ಮೀಸಲಾತಿಯನ್ನು ನಿಷೇಧಿಸಿತ್ತು. ಆದರೆ ಪ್ರಧಾನಿ ಶೇಖ್ ಹಸೀನಾ ಅವರು ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ತರುವ ನಿರ್ಧಾರ ನನ್ನ ಕೈಯಲ್ಲಿದೆ ಎಂದಿದ್ದಾರೆ. ಹಸೀನಾ ಅವರ ಈ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಪರಿಣಾಮ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

