ಶ್ರಿಲಂಕಾ: ʼನೆರೆಹೊರೆ ಮೊದಲುʼ ಎಂಬ ಭಾರತದ ವಿದೇಶಾಂಗ ನೀತಿಗೆ ಅನುಗುಣವಾಗಿ ನೆರೆಯ ರಾಷ್ಟ್ರ ಶ್ರಿಲಂಕಾಗೆ ಭಾರತ ನೆರವಿನ ಹಸ್ತ ಚಾಚಿದೆ.
ಶ್ರೀಲಂಕಾದ ಸುವಾಸೇರಿಯಾ ಆಂಬ್ಯುಲೆನ್ಸ್ ಸೇವೆಗೆ ಅಗತ್ಯವಿರುವ ಸುಮಾರು 3.3ಟನ್ ಔಷಧಿಗಳು, ಉಪಕರಣಗಳನ್ನೊಳಗೊಂಡ ವೈದ್ಯಕೀಯ ಸರಬರಾಜನ್ನು ಕೋಲಂಬೋದ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಹಸ್ತಾಂತರಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತ ಸಹಾಯ ಮಾಡಿದೆ.
ಮಾರ್ಚ್ ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ವೈದ್ಯಕೀಯ ಸರಬರಾಜುಗಳ ಕೊರತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 3.3ಟನ್ ವೈದ್ಯಕೀಯ ಸರಬರಾಜನ್ನು ಭಾರತದ ನೌಕಾಸೇನೆಯ ಐಎನ್ಎಸ್ ಘರಿಯಲ್ ಮೂಲಕ ಕಳುಹಿಸಿಕೊಡಲಾಗಿದ್ದು ಪ್ರಸ್ತುತ ಅದನ್ನು ಕೋಲಂಬೋದಲ್ಲಿರುವ ಭಾರತೀಯ ಹೈ ಕಮಿಷನ್ ವತಿಯಿಂದ ಹಸ್ತಾಂತರಿಸಲಾಗಿದೆ.