ಕಾರವಾರ, ; ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿಯ (ಅಂಬೆರ್ಗ್ರಿಸ್) ಸುಮಾರು ಒಂದು ಕೆಜಿ ತೂಕದ ತುಣುಕು ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದ್ದು, ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎಂಬ ಮೀನುಗಾರ ಕಡಲತೀರದಲ್ಲಿ ತೆರಳುವಾಗ ತಿಮಿಂಗಿಲದ ವಾಂತಿ ಕಂಡಿದ್ದು, ಕಲ್ಲಿನಾಕಾರದಲ್ಲಿತ್ತು. ಇದನ್ನು ಮನೆಗೆ ತಂದು ತಿಳಿದವರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದ್ದು, ಕೋಟ್ಯಾಂತರ ರುಪಾಯಿ ಬೆಲೆಬಾಳುತ್ತದೆ ಎಂದು ತಿಳಿದಿದ್ದಾರೆ. ನಂತರ ನಮ್ಮ ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದ ಅವರು, ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ.
ಏನಿದು ತಿಮಿಂಗಿಲದ ವಾಂತಿ?; ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕುವ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೆರ್ಗ್ರಿಸ್ ಎಂದು ಇಂಗ್ಲೀಷ್ನಲ್ಲಿ ಹಾಗೂ ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ. ಈ ಕುರಿತು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನಿಡಿದ್ದು, “ಎಲ್ಲಾ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು. ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೆರ್ಗ್ರಿಸ್ ಹೊರ ಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ” ಎಂದು ತಿಳಿಸಿದ್ದಾರೆ.
ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೇ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ. ಮೀನಿನ ಮೂಳೆಗಳು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ.
ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರುತ್ತದೆ. ತಿಮಿಂಗಿನ ಹೊರಹಾಕಿದ ವಾಂತಿಯು ಮೊದಲು ಭಾರವಾಗಿದ್ದು, ನಂತರ ಸಮುದ್ರದಲ್ಲಿ ರಾಸಾಯನಿಕ ಪ್ರಕ್ರಿಯೆಯಲ್ಲಿ ಗಟ್ಟಿಯಾಗಿ ನಿಧಾನ ಗತಿಯಲ್ಲಿ ನೀರಿನಲ್ಲಿ ತೇಲುತ್ತದೆ. ಕೆಲವೊಮ್ಮೆ ಪ್ರಖರ ಬಿಸಿಲಿಗೆ ಕರಗುವ ಸಾಧ್ಯತೆಯಿರುತ್ತದೆ ಎಂದು ವಿವರಿಸಿದ್ದಾರೆ. ಒಂದುವೇಳೆ, ತಿಮಿಂಗಿಲವು ಮೀನುಗಳನ್ನು ತಿಂದ ಒಂದೆರಡು ವಾರಗಳಲ್ಲೇ ಎಲುಬುಗಳನ್ನು ಹೊರ ಹಾಕಿದರೆ ಅದು ಅಸಹನೀಯ ವಾಸನೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತದೆ. ಒಂದು ತಿಮಿಂಗಿಲ ಒಂದು ಕೆಜಿ ಇಂದ ಹತ್ತು ಕೆಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗ ದಲ್ಲಿ ಇವು ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಇದರ ವಾಂತಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್ ನಂತೆ ಕರಗಿ ಕೆಟ್ಟ ವಾಸನೆ ಬರುತ್ತದೆ. ಆದರೇ ನಂತರ ಸುಂಗಂಧ ಭರಿತವಾಗಿರುತ್ತದೆ.ಇದಕ್ಕೆ ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಅತೀ ಬೇಡಿಕೆ ಇದೆ. ಹೀಗಾಗಿ ಪಾಶ್ಚಿಮಾತ್ಯ ರಾಜ್ಯದಲ್ಲಿ ಇದಕ್ಕೆ ಒಂದು ಕೆಜಿಗೆ ಕೋಟಿ ಬೆಲೆ ಇರುತ್ತದೆ. ಹೀಗಾಗಿ ವೇಲ್ಗಳ ಮಾರಣ ಹೋಮವು ಸಹ ನಡೆಯುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು, ಮಾರುವುದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಇನ್ನು ಹಲವು ದೇಶದಲ್ಲಿ ಇವುಗಳ ಮಾರಾಟ, ಆಮದಿಗೆ ಸಹ ಅನುಮತಿ ಇದೆ. ಹೀಗಾಗಿ ಇದರ ಮೌಲ್ಯ ಹೆಚ್ಚು ಪಡೆದುಕೊಂಡಿದ್ದು, ಕಳ್ಳಹಾದಿಯಲ್ಲಿ ಸಹ ಮಾರಾಟವಾಗುತ್ತದೆ.
“ಸದ್ಯ ಅರಣ್ಯ ಇಲಾಖೆ ಬಳಿ ಹಸ್ತಾಂತರವಾಗಿರುವ ಈ ಅಂಬೆರ್ಗ್ರಿಸ್ ಅತೀ ವಿರಳವಾಗಿ ದೊರಕುವ ಹಾಗೂ ಕೋಟಿ ಬೆಲೆ ಬಾಳುವ ಇದು ನೋಡ ಸಿಗುವುದು ಅಪರೂಪ. ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇದ್ದರೆ ಇದರ ಅಧ್ಯಯನಕ್ಕೆ ಸಿಗುವುದಿಲ್ಲ. ಹೀಗಾಗಿ ಕಾರವಾರದಲ್ಲಿ ಇರುವ ವಿಜ್ಞಾನ ಅಧ್ಯಯನ ಕೇಂದ್ರದಕ್ಕೆ ನೀಡಿದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸಹಾಯವಾಗಲಿದೆ” ಎಂಬುದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಅಭಿಪ್ರಾಯ.
ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಬಿತ್ತನೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಯಷ್ಟು…
'ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿರುವಂತೆ ಹಾಸನದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ…
ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಏಪ್ರಿಲ್ 21 ರಂದು…
ಜಿಲ್ಲೆಯ ಜನ ಸ್ವತಂತ್ರರಾಗಿ ಬದುಕಬೇಕಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ.…
ವಕೀಲರೊಬ್ಬರ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ಅಲ್ಮೆಲ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮತ್ತು ಶಾಸಕ ಅಶೋಕ ಮನಗೂಳಿಯವರು ಪಾದಯಾತ್ರೆ ನಡೆಸಿ ಮತಯಾಚಿಸಿದರು.