ಕೋಝಿಕ್ಕೋಡ್: ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಸೌಹಾರ್ದತಾ ರ್ಯಾಲಿಯಲ್ಲಿ ನಾಳೆ ಖಂಡಿತಾ ಭಾಗವಹಿಸುತ್ತೇನೆ ಮತ್ತು ಆರ್ಎಸ್ಎಸ್ನ ಪ್ರತಿಭಟನೆಗೆ ಅಲ್ಲಿಗೆ ಹೋಗಿ ಬಂದ ನಂತರ ಉತ್ತರ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಪಿಣರಾಯಿ ವಿಜಯನ್ ಭೇಟಿ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇರಳದ ಮುಖ್ಯಮಂತ್ರಿಯ ಸುರಕ್ಷೆಗಾಗಿ ಹೆಚ್ಚಿನ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದೆ.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಇಂದು ಕೂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಿಣರಾಯಿ ಭಾಷಣ ಮಾಡುವುದನ್ನು ಪ್ರತಿಭಟಿಸಿ ಹಿಂದೂ ವಿರೋಧಿ ಪಿಣರಾಯಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.