ಬೋಪಾಲ್: ಬಸ್ಸಿನಲ್ಲಿ ಪ್ರಯಾಣಿಸುವಾಗ, ಪ್ರಯಾಣಿಕರ ವಾಂತಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹೀಗೆ ವಾಂತಿ ಬಂದಾಗ ಸುಲಭವಾಗಲಿ ಎಂಬ ಕಾರಣಕ್ಕೆ ಕಿಟಿಕಿ ಬದಿಯಲ್ಲಿ ಕುಳಿತುಕೊಂಡು ಬಿಡುತ್ತಾರೆ. ಈ ಸಂದರ್ಭ ವಾಂತಿ ಬಂದರೆ ಜಾಗರೂಕತೆ ವಹಿಸಿಕೊಂಡು ವಾಂತಿ ಮಾಡಬೇಕು. ಅಜಾಗರೂಕತೆಯಿಂದ ತಲೆ ಹೊರಗೆ ಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಿದರ್ಶನವಾಗಿ ಬೋಪಾಲ್ನಲ್ಲಿ ಮನಕಲುಕುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಖಾಂದ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಮನ್ನಾ ಅನ್ನುವ 11 ವರ್ಷದ ಹುಡುಗಿ ಆಕೆಯ ಪರಿವಾರದೊಂದಿಗೆ ಬರ್ವಾದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಸ್ಸಿನಲ್ಲಿ ಪ್ರಯಾಣಸುತ್ತಿದ್ದರು. ಸುಮಾರು 9 30 ರ ಹೊತ್ತಿಗೆ ಖಾಂದ್ವಾ- ಇಂದೋರ್ ಹೆದ್ದಾರಿಯ ಮದ್ಯೆ ವಾಕರಿಕೆ ಬಂತು ಅನ್ನುವ ಕಾರಣಕ್ಕೆ ಬಸ್ಸಿನಿಂದ ತಲೆ ಹೊರಗೆ ಹಾಕಿದ್ದಾಳೆ. ಈ ಸಂದರ್ಭದಲ್ಲೇ ಬಂದ ಟ್ರಕ್ ನಿಂದಾಗಿ ಆಕೆಯ ತಲೆ ಕತ್ತರಿಸಿ ಕೆಳಗೆ ಬಿದ್ದ ಪರಿಣಾಮ ಆಕೆ ಮೃತಪಟ್ಟ ಘಟನೆ ನಡೆದಿದೆ. ಭಯಾನಕ ಘಟನೆಯನ್ನು ಕಣ್ಣೆದುರಲ್ಲೇ ನೋಡಿದ ಆಕೆಯ ಕುಟುಂಬ ಆಘಾತಕ್ಕೆ ಒಳಗಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನ ಪತ್ತೆಯಲ್ಲಿದ್ದಾರೆ.