ನವದೆಹಲಿ : ಮೈಸೂರು ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಗಳ ನಡುವೆ ನಡೆದಿದ್ದ ವಾದ-ಪ್ರತಿವಾದಗಳ ನಂತರ ಅವರ ವರ್ಗಾವಣೆ ಮಾಡಲಾಗಿತ್ತು. ಇಷ್ಟಾದ ಮೇಲೆಯೂ ಈ ಚರ್ಚೆ ಮುಂದುವರೆದಿದ್ದು, ಜಿಲ್ಲಾಧಿಕಾರಿ ರೋಹಿನಿ ಸಿಂಧುರಿ ವರ್ಗಾವಣೆ ಪ್ರಕರಣ ಇದೀಗ ಪ್ರಧಾನಿ ಸಚಿವಾಲಯದ ಮೆಟ್ಟಿಲೇರಿದೆ.
ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರ ಹೊಂದಿದೆ . ಆದರೆ ಸೇವಾ ನಿಯಮಗಳು ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿವೆ . ರೋಹಿಣಿ ಸಿಂಧೂರಿ ಅವರು ವರ್ಗಾವಣೆಯಾದ ಬಳಿಕ ಹಲವು ವ್ಯಕ್ತಿಗಳು ಪತ್ರ ಮತ್ತು ಈ ಮೇಲ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ .
ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ತರಲು ಸಂಕಲ್ಪ ತೊಟ್ಟಿದ್ದ ಅಧಿಕಾರಿಯೊಬ್ಬರನ್ನು ದಿಢೀರ್ ವರ್ಗ ಮಾಡಲಾಗಿದೆ . ಇದು ಜಿಲ್ಲಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಎಂಬ ಆಶಯಕ್ಕೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ . ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪ್ರಧಾನಿ ಸಚಿವಾಲಯ ಸ್ಪಷ್ಟಿಕರಣ ಕೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ .
ಜತೆಗೆ ಮೈಸೂರಿನಲ್ಲಿ ಸದ್ದು ಮಾಡಿರುವ ಭೂ ಹಗರಣವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ . ಈ ಎಲ್ಲ ಮಾಹಿತಿಯನ್ನು ರೋಹಿಣಿ ಸಿಂಧೂರಿ ಮೇಲಿನ ಅಭಿಮಾನದಿಂದ ಕೆಲವು ವ್ಯಕ್ತಿಗಳು ಪ್ರಧಾನಿ ಸಚಿವಾಲಯಕ್ಕೆ ರವಾನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.