ಹೊಸದಿಲ್ಲಿ: ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನಾನೇಕೆ ಹೆದರಲಿ, ನಾನು ಇಂದಿರಾಗಾಂಧಿಯ ಸೊಸೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆಸ್ತಿ ಪರಭಾರೆ ಹಗರಣ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಪಟಿಯಾಲ ನ್ಯಾಯಾಲಯ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸೋನಿಯಾ, ರಾಹುಲ್ ದೆಹಲಿ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈ ಕೋರ್ಟ್ ಇಂದು ಅರ್ಜಿಯನ್ನು ವಜಾಗೊಳಿಸಿದೆ.
ಸದ್ಯ ಪ್ರಕಟಣೆ ನಿಲ್ಲಿಸಿರುವ ನ್ಯಾಷನಲ್ ಹೆರಾಲ್ಡ್ ಕಂಪನಿಗೆ ದೇಶದ ವಿವಿಧೆಡೆ 2000 ಕೋಟಿ ರೂ. ಬೆಲೆಬಾಳುವ ಭೂಮಿ ಇದೆ. ಇದನ್ನು ಕಬಳಿಸಲು ಸೋನಿಯಾ, ರಾಹುಲ್ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಸೋನಿಯಾ ಹಾಗೂ ರಾಹುಲ್ಗೆ 2014ರಲ್ಲಿ ದೆಹಲಿ ವಿಚಾರಣಾಧೀನ ಕೋರ್ಟ್ ಸಮನ್ಸ್ ಕೂಡ ಜಾರಿ ಮಾಡಿತ್ತು. ಮಂಗಳವಾರ ದೆಹಲಿಯ ಪಟಿಯಾಲಾ ಕೋರ್ಟ್, ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಡಿಸೆಂಬರ್ 19ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ.