ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾದ ನಂತರ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಯಾರೊಬ್ಬರನ್ನೂ ಕಡೆಗಣಿಸದೆ ಎಲ್ಲರಿಗೂ ಲಸಿಕೆ ಪೂರೈಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ರಾಷ್ಟ್ರೀಯ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಈ ವಿಷಯ ತಿಳಿಸಿದ್ದಾರೆ.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಜನರಿಗೆ ಉಚಿತ ಲಸಿಕೆ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಭರವಸೆಗೆ ಪ್ರತಿಪಕ್ಷಗಳು ಕೆಂಡಕಾರಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡದುಕೊಂಡಿದೆ. ಲಸಿಕೆ ಲಭ್ಯವಾದ ತಕ್ಷಣ … ನಾವು ಎಲ್ಲರಿಗೂ ಲಸಿಕೆ ಒದಗಿಸಲಿದ್ದೇವೆ. ಯಾರನ್ನೂ ಮರೆಯುವುದಿಲ್ಲ ಕಡೆಗಣಿಸುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಮೊದಲು ಕೊರೊನಾ ವಾರಿಯರ್ಸ್ ಲಸಿಕೆ ನೀಡಲು ಗಮನ ಹರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಪೂರೈಕೆ ಕಾರ್ಯದಲ್ಲಿ “ರಾಷ್ಟ್ರೀಯ ತಜ್ಞರ ತಂಡ” ರಚಿಸಲಾಗಿದ್ದು, ಅವರು ಆದ್ಯತೆಯನ್ನು ನಿರ್ಧರಿಸಲಿದ್ದಾರೆ ಎಂದು ಪ್ರಧಾನಿ ವಿವರಿಸಿದ್ದಾರೆ.