ನವದೆಹಲಿ: ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಿಗೆ ನೇಣು ಹಾಕುವ ಬದಲು ಬೇರೆ ಯಾವುದಾದರೂ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮರಣದಂಡನೆಗೆ ಗುರಿಯಾಗುವ ವ್ಯಕ್ತಿಗಳಿಗೆ ನೇಣು ಹಾಕುವ ಶಿಕ್ಷೆ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿತ್ತು. ಇದರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ವೈಜ್ಞಾನಿಕವಾಗಿ ಮುಂದುವರಿದಿರುವ ಇಂದಿನ ದಿನಗಳಲ್ಲಿ ಗಲ್ಲಿಗೇರಿಸುವ ಬದಲು ಬೇರೆ ಯಾವುದಾದರೂ ಪರ್ಯಾಯವಿದ್ದರೆ ಸೂಚಿಸಬೇಕು ಎಂದು ಸರ್ಕಾರಕ್ಕೆ ಹೇಳಿದೆ.
ಮುಖ್ಯ ನ್ಯಾಯಾಧೀಶರಾಗಿರುವ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರುಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮೂರು ವಾರಗಳಲ್ಲಿ ಇದಕ್ಕೆ ಪರ್ಯಾಯವನ್ನು ಸೂಚಿಸಬೇಕೆಂದು ಸು.ಕೋರ್ಟ್ ತನ್ನ ನೋಟಿಸ್ ನಲ್ಲಿ ಹೇಳಿದೆ.
ಮರದಂಡನೆಗೆ ಗುರಿಯಾಗುವ ಅಪರಾಧಿಗಳಿಗೆ ಗಲ್ಲು ನೀಡುವ ಬದಲು ಬೇರೆ ಯಾವುದಾದರೂ ವಿಧಾನದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬಹುದು. ವಿಜ್ಞಾನದಲ್ಲಿ ಹಲವಾರು ಆಯ್ಕೆಗಳು ನಿಮಗೆ ಸಿಗಬಹುದು ಎಂದು ಕೋರ್ಟ್ ತಿಳಿಸಿದೆ.
ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವ ಬದಲು ಬೇರೆ ಯಾವುದಾದರೂ ಕ್ರಮ ಅನುಸರಿಸಬೇಕು ಎಂದು ವಕೀಲರಾದ ರಿಶಿ ಮಲ್ಹೋತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.