ನವದೆಹಲಿ: ರೈತರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮೂರು ಕಾಯ್ದೆಯ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲು ಜನವರಿ 4 ರಂದು ಕೇಂದ್ರದೊಂದಿಗೆ ಮಾತುಕತೆ ನಡೆಸುವ ಮುನ್ನ ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸಲು ರೈತ ಸಂಘದ ಮುಖಂಡರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಜನವರಿ 4ರಂದು ಸರ್ಕಾರದೊಂದಿಗೆ ಮಾತುಕತೆ ವಿಫಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ನೇತೃತ್ವದ ರೈತ ಸಂಘಟನೆಗಳು ಶುಕ್ರವಾರ ಸಿಂಗು ಗಡಿಯಲ್ಲಿ ಸಭೆ ಸೇರಿದ್ದವು, ಈ ಸಂದರ್ಭದಲ್ಲಿ ಕೇಂದ್ರವು ತಮ್ಮ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದರೆ ಜನವರಿ 6 ರಂದು ಕುಂಡ್ಲಿ ಮನೇಸರ್ ಪಾಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಬೇಕೆಂದು ನಿರ್ಧರಿಸಲಾಗಿದೆ.
“ಸರ್ಕಾರದೊಂದಿಗೆ 6ನೇ ಸುತ್ತಿನ ಮಾತುಕತೆ ವಿಫಲವಾದರೆ` ದೇಶ್ ಜಾಗೃತಿ ಅಭಿಯಾನ್` ಅನ್ನು ಜನವರಿ 6 ರಿಂದ 20 ರವರೆಗೆ ದೇಶಾದ್ಯಂತ ಆಯೋಜಿಸಲಾಗುವುದು ಎಂದು ಎಸ್ಕೆಎಂ ಹೇಳಿಕೆ ತಿಳಿಸಿದೆ.
ಪ್ರತಿಭಟನಾ ಸ್ಥಳದಲ್ಲಿ ರೈತರೊಂದಿಗೆ ಹೊಸ ವರ್ಷವನ್ನು ಆಚರಿಸಬೇಕೆಂದು ಎಸ್ಕೆಎಂ ಸಾಮಾನ್ಯ ಜನರಿಗೆ ಮನವಿ ಮಾಡಿತ್ತು . “ಎಸ್ಕೆಎಂ ಮಾಡಿದ ಮನವಿಗೆ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ” ಎಂದು ತಿಳಿಸಿದೆ.
ದೇಶಾದ್ಯಂತ ರೈತರು ಸೇರಿದಂತೆ ಬಹಳಷ್ಟು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಚಳವಳಿಗೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದರು.
“ದೆಹಲಿ ಫಾರ್ ಫಾರ್ಮರ್ಸ್” ದೆಹಲಿಯ ವಿವಿಧ ಭಾಗಗಳಲ್ಲಿ ಬೆಳಿಗ್ಗೆ 8 ರಿಂದ ಪ್ರತಿಭಟನೆ ನಡೆಸಿತು ಮತ್ತು ಬರ್ನಲಾದ ರೈತರು ಶುಕ್ರವಾರ ತಮ್ಮ ಟ್ರಾಕ್ಟರ್ ಅನ್ನು ರಿವರ್ಸ್ ಗೇರ್ ಹಾಕಿ ಚಾಲನೆ ಮಾಡುವ ಮೂಲಕ ಮೂಲಕ ಟಿಕ್ರಿ ಗಡಿಯನ್ನು ತಲುಪಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ದೇಶದ ಇತರ ಭಾಗಗಳಲ್ಲಿನ ರೈತರು ಅನಿರ್ದಿಷ್ಟವದಿ ಧರಣಿ ಆಯೋಜಿಸಿದರು. ರೈತರ ಆಂದೋಲನವನ್ನು ಬೆಂಬಲಿಸಿ ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನೂ ಎಸ್ಕೆಎಂ ಶ್ಲಾಘಿಸಿದೆ.