ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ಬುಧವಾರ ಸಂಜೆ ತೀರ್ಪು ಪ್ರಕಟವಾಗಿದ್ದು, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ದೊರಕಿದೆ.
49ರ ಹರೆಯದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಐಸಿಜೆ ರದ್ದುಗೊಳಿಸಿದೆ ಮತ್ತು ರಾಜತಾಂತ್ರಿಕ ನೆರವು ಪಡೆಯಲು ಕುಲಭೂಷಣ್ ಅವರಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದೆ.
ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಅವರನ್ನು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದ ಪಾಕಿಸ್ತಾನದ ಸೇನಾ ಕೋರ್ಟ್ 2017ರ ಎಪ್ರಿಲ್ ನಲ್ಲಿ ಗಲ್ಲು ಶಿಕ್ಷೆ ತೀರ್ಪು ನೀಡಿತ್ತು.
ಇದರ ವಿರುದ್ಧ ಭಾರತದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು ಮತ್ತು ಕೇಂದ್ರ ಸರ್ಕಾರವು ಈ ತೀರ್ಪಿನ ವಿರುದ್ಧ ಐಸಿಜೆಗೆ ಮೇಲ್ಮನವಿ ಸಲ್ಲಿಸಿತ್ತು.