ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿದೆ. ಜಗತ್ತಿನಲ್ಲಿ ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಈ ಭಯೋತ್ಪಾದನೆ ಎದುರಾಳಿ ದೇಶಕ್ಕೆ ಮಾತ್ರವಲ್ಲ, ಅವರಿಗೂ ಅಪಾಯ ಎಂಬುದನ್ನು ಅವರು ಮರೆಯಬಾರದು ಎಂದು ಹೇಳಿದರು.
ಇದೇ ವೇಳೆ ಅಫ್ಘಾನ್ ನೂತನ ಸರ್ಕಾರದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನವೂ ಭಯೋತ್ಪಾದನೆಯನ್ನು ಪ್ರಚೋದಿಸಬಾರರು. ಕೆಲವರು ಅಫ್ಘಾನಿಸ್ತಾನದ ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನದ ಭೂಮಿ ಭಯೋತ್ಪಾದನೆಗೆ ಬಳಕೆ ಆಗಬಾರದು ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇನೆ. ಅಫ್ಘಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಇದೀಗ ಅಲ್ಲಿನ ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತರಿಗೆ ರಕ್ಷಣೆ ಬೇಕು. ಅಲ್ಲಿನ ಪರಿಸ್ಥಿತಿ ಬೇರೆ ಉದ್ದೇಶಗಳಿಗೆ ಬಳಕೆ ಆಗಬಾರದು ಎಂದು ಹೇಳಿದರು.
ಲಸಿಕೆ ಉತ್ಪಾದನೆಗೆ ಆಹ್ವಾನ
ತಮ್ಮ ಭಾಷಣದಲ್ಲಿ ಕೋವಿಡ್ ವಿರುದ್ಧದ ಲಸಿಕೆ ತಯಾರಕರಿಗೆ ಭಾರತಕ್ಕೆ ಬಂದು ವ್ಯಾಕ್ಸಿನೇಷನ್ ತಯಾರಿಕೆ ಮಾಡಲು ಆಹ್ವಾನ ನೀಡಿದ್ದಾರೆ. ಕೊರೋನಾ ವಿರುದ್ಧ ಜಗತ್ತು ಹೋರಾಟ ನಡೆಸಿದ್ದು, ಇದೇ ಕಾರಣಕ್ಕಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದೇವೆ. ಆದರೆ, ಇದೀಗ ನಾವು ಆತ್ಮನಿರ್ಭರ ಭಾರತ ಅಭಿಯಾನದಿಂದ ಅನೇಕ ಯೋಜನೆ ಹಮ್ಮಿಕೊಂಡಿದ್ದು, ಇದು ಆರ್ಥಿಕ ಸಬಲತೆಗೆ ಕಾರಣವಾಗಿದೆ ಎಂದರು.
ಕಳೆದ 1.5 ವರ್ಷದಿಂದ ಇಡೀ ವಿಶ್ವ ಮಹಾಮಾರಿ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಿದೆ. ಸುಮಾರು 100 ವರ್ಷದ ಬಳಿಕ ಇಡೀ ಪ್ರಪಂಚವೇ ಭೀಕರ ಸಾಂಕ್ರಾಮಿಕ ರೋಗ ಎದುರಿಸುತ್ತಿದೆ. ಈ ಮಾರಕ ರೋಗಕ್ಕೆ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಹಾಗೂ ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಎಂದರು.
ಭಾರತ ವಿಶ್ವದ ಮೊದಲ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದೆ. ಇದನ್ನ ಯುಎನ್ಜಿಎಗೆ ತಿಳಿಸಲು ನಾನು ಬಯಸುತ್ತೇನೆ. ಈ ಲಸಿಕೆಯನ್ನ 12 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು. ಭಾರತೀಯ ವಿಜ್ಞಾನಿಗಳು ಕೋವಿಡ್ ವಿರುದ್ಧದ ಲಸಿಕೆ ಅಭಿವೃದ್ಧಿಪಡಿಸಲು ಸತತ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.
ಭಾರತ ಬೆಳೆದರೆ ಜಗತ್ತೂ ಬೆಳೆಯಲಿದೆ. ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನು ಬದಲಾಯಿಸುತ್ತವೆ ಎಂದು ಮೋದಿ ಹೇಳಿದ್ದಾರೆ. ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಸರ್ವರನ್ನೂ ತಲುಪುವಂತಿರಬೇಕು ಇದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ.
ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಉಲ್ಲೇಖಿಸಿರುವ ಮೋದಿ, ಮಲಿನಗೊಂಡಿರುವ ನೀರಿನ ಸಮಸ್ಯೆ ಭಾರತಕ್ಕೆ ಅಷ್ಟೇ ಸೀಮಿತವಾಗಿಲ್ಲ. ಬಡ ಹಾಗೂ ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲೂ ಈ ಸಮಸ್ಯೆ ಇದೆ ಎಂದು ಹೇಳಿದ್ದಾರೆ.
ಈ ಸಮಸ್ಯೆಯನ್ನು ಕೊನೆಗಾಣಿಸುವುದಕ್ಕಾಗಿ 17 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಅಭಿಯಾನ ಕೈಗೊಂಡಿದ್ದೇವೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.
ಭಾರತ ಉಜ್ವಲ ಉತ್ಸಾಹಭರಿತ ಪ್ರಜಾಪ್ರಭುತ್ವಕ್ಕೆ ಉದಾಹರಣೆ ಎಂದು ಮೋದಿ ಹೇಳಿದ್ದು, ನಮ್ಮಲ್ಲಿನ ವೈವಿಧ್ಯತೆ ಬಲಿಷ್ಠ ಪ್ರಜಾಪ್ರಭುತ್ವದ ಗುರುತಾಗಿದೆ ಎಂದಿದ್ದಾರೆ. ಇದೇ ವೇಳೆ ಕೋವಿಡ್-19 ಲಸಿಕೆಗಳನ್ನು ಭಾರತದಲ್ಲಿ ಉತ್ಪಾದಿಸಲು ಮೋದಿ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಟೀ ಮಾರಾಟ ಮಾಡುತ್ತಿದ್ದ ನಾನು ಇಂದು ನಾಲ್ಕನೇ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ. ಭಾರತ ಇಂದು ಸಮಗ್ರ ಅಭಿವೃದ್ಧಿಯನ್ನು ನೋಡುತ್ತಿದೆ ಇಡೀ ವಿಶ್ವವೇ ವಿಜ್ಞಾನ ಆಧಾರಿತ ವೈಚಾರಿಕ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿ ಪಡಿಸಬೇಕು. ವಿಜ್ಞಾನ ಆಧಾರಿತ ವಿಧಾನವನ್ನು ಬಲಪಡಿಸುವ ಸಲುವಾಗಿ, ಭಾರತವು ಅನುಭವ ಆಧಾರಿತ ಕಲಿಕೆಯನ್ನು ಉತ್ತೇಜಿಸುತ್ತಿದೆ.
ಕಳೆದ ಏಳು ವರ್ಷಗಳಲ್ಲಿ ನಮ್ಮ ಸರ್ಕಾರ 43 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಪಡೆದಿದ್ದಾರೆ. 36 ಕೋಟಿ ಜನರಿಗೆ ವಿಮೆ ಮಾಡಿಸಲಾಗಿದೆ. ನಾವು 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಇದರಿಂದ ಸೂರಿಲ್ಲದವರು ಈಗ ಮನೆ ಮಾಲೀಕರಾಗಿದ್ದಾರೆ. 17 ಕೋಟಿ ಮನೆಗಳಿಗೆ ಪೈಪ್ ನೀರು ಒದಗಿಸಲು ನೋಡುತ್ತಿದ್ದೇವೆ ಎಂದು ಎನ್ಡಿಎ ಸರ್ಕಾರದ ಸಾಧನೆ ತಿಳಿಸಿದರು.