ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಭಾನುವಾರ ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜಿನ ಗೌತಮ್ (17) ಈಜಲು ಹೋಗಿ ಮೃತಪಟ್ಟಿದ್ದನು. ಧನುಷ್ ಎಂಬಾತನನ್ನ ರಕ್ಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಪ್ರವಾಸಿಗರ ಹುಚ್ಚಾಟಕ್ಕೆ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ.

ವೀಕೆಂಡ್ ಆದ್ದರಿಂದ ಹೆಚ್ಚು ಪ್ರವಾಸಿಗರು ಕಡಲ ತೀರಕ್ಕೆ ಆಗಮಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಮುರುಡೇಶ್ವರ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಇದರಿಂದಾಗಿ ದಸರ ರಜೆ ವೀಕೆಂಡ್ ಎಂಜಾಯ್ ಮಾಡಲು ಬಂದ ಪ್ರವಾಸಿಗರ ಖುಷಿಗೆ ತಣ್ಣೀರು ಬಿದ್ದಿದ್ದು ಕಡಲ ತೀರ ಖಾಲಿ ಹೊಡೆಯುತ್ತಿದೆ. ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕಡಲ ತೀರದಲ್ಲಿ ಲೈಫ್ ಗಾರ್ಡ್‌ ಹಾಗೂ ಪೊಲೀಸ್‌ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಇದಕ್ಕೆ ಕೆಲ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.