ಉಡುಪಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಪ್ರದೇಶದಲ್ಲಿ ಇಬ್ಬರ ಸಾವಿಗೆ ಕಾರಣವಾದ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ವಶಕ್ಕೆ ಬಂದಿದೆ. ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಬೃಹತ್ ಮಟ್ಟದ ಶೋಧ ಮತ್ತು ಬಂಧನ ಕಾರ್ಯಾಚರಣೆ ನಡೆಸಿತ್ತು.

ಆನೆ ಭಗವತಿ ನೇಚರ್‌ಕ್ಯಾಂಪ್‌ ಸಮೀಪದ ಕಾಡಿನಲ್ಲಿ ಅಡಗಿಕೊಂಡಿದ್ದು, ಬಂಧನ ಕಾರ್ಯಾಚರಣೆಯನ್ನು ಮಂಗಳೂರು ಅರಣ್ಯ ವೃತ್ತ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಈ ವೇಳೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗು ಜಿಲ್ಲೆಯ ದುಬಾರೆ ಮತ್ತು ನಾಗರಹೊಳೆ ಆನೆ ಬಿಡಾರಗಳಿಂದ ಬಂದ ನುರಿತ ತಂಡಗಳು ಹಾಗೂ ಐದು ತರಬೇತಿ ಪಡೆದ ಆನೆಗಳು ಸಹಕರಿಸಿವೆ.

ಆನೆಯನ್ನು ಹುಡುಕಲು ಡ್ರೋನ್‌ಗಳ ಸಹಾಯ ಪಡೆದು ಕುದುರೆಮುಖ ಪರ್ವತ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದ್ದು, ಭಾನುವಾರ ಬೆಳಿಗ್ಗೆ ಆನೆ ಪತ್ತೆಯಾಗಿತ್ತು. ನಿಖರ ಯೋಜನೆಯಡಿ ಮಧ್ಯಾಹ್ನ ವೇಳೆಗೆ ಆನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಇತ್ತೀಚೆಗಷ್ಟೇ ಇದೇ ಆನೆ ಕೆರೆಗದ್ದೆ ಪ್ರದೇಶದಲ್ಲಿ ಇಬ್ಬರು ಕೃಷಿಕರಾದ ಹರೀಶ್ ಶೆಟ್ಟಿ (44) ಮತ್ತು ಉಮೇಶ್ (48) ಅವರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾಗಿತ್ತು. ಘಟನೆಯ ನಂತರ ಸ್ಥಳೀಯರು ಪ್ರತಿಭಟನೆ ನಡೆಸಿ ಗರಿಷ್ಠ ಪರಿಹಾರ ಮತ್ತು ಆನೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದರು. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಆನೆಗೆ ಚಿಕಿತ್ಸೆ ನೀಡಿದ ಬಳಿಕ ಸ್ಥಳಾಂತರ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.