ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜನಪದ ಹಾಡುಗಾರ್ತಿ ವಸಂತಿ ಕಡ್ತಲ, 317 ಸಿ ಇದರ ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಭಾಗವಹಿಸಿದ್ದರು. ಉಡುಪಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕಾರ್ಯದರ್ಶಿ ಡಾ. ರೋಶನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ರಮಾನಂದ ನಾಯಕ್, ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ್ ಶೆಟ್ಟಿ ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ ಜನಪದ ಗಾಯಕಿ ವಸಂತಿ ಕಡ್ತಲ ಅವರು ಪಾಡ್ದನ ಮೂಲಕ ಆಟಿ ಕೂಟಕ್ಕೆ ಮೆರುಗು ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಲಯನ್ ಲೇಡಿ ಕೌನ್ಸಿಲ್ ವತಿಯಿಂದ ತುಳು ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ನೃತ್ಯ ರೂಪಕ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಜನಪದ ಹಾಡುಗಾರ್ತಿ ವಸಂತಿ ಕಡ್ತಲ – ರಘು ಪರವ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಭೋಜನ ಕೂಟದಲ್ಲಿ ಆಟಿ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳಾದ ಪತ್ರೋಡೆ, ಪಾಯಸ, ಅಪ್ಪ, ಹಲಸಿನ ಎಲೆ ಗಟ್ಟಿ, ಊರಕೋಳಿ ಸುಕ್ಕವನ್ನು ಸವಿದರು.