ಉಡುಪಿ: ರಾಷ್ಟ್ರೀಯ ಕೈಮಗ್ಗ ದಿನಾಚರಣೆ 2025ರ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಉಡುಪಿ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ “ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗದ ಸೀರೆಗಳನ್ನು ಉಟ್ಟು ಪ್ರದರ್ಶಿಸುವ ಸೌಂದರ್ಯ ಸ್ಪರ್ಧೆಯನ್ನು ನಗರದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಉತ್ತಮ ವಸ್ತ್ರ ಮನುಷ್ಯನಿಗೆ ಗೌರವ ತಂದು ಕೊಡುತ್ತದೆ. ಆದುದರಿಂದ ನೇಕಾರರ ಸೇವೆ ಸಮಾಜದ ಅತಿ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಕೈಮಗ್ಗದ ಉದ್ದಿಮೆಯು ಪುನರಜ್ಜೀವನ ಆಗಬೇಕು. ಅದಕ್ಕೆ ಪ್ರೇರಣೆ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಉಡುಪಿ ಜಿಲ್ಲಾ ಬಿಜೆಪಿ ನೇಕಾರ ಪ್ರಕೊಷ್ಠದ ಸಂಚಾಲಕ ಅಶೋಕ ಶೆಟ್ಟಿಗಾರ್, ಪ್ರಮುಖರಾದ ದಿಲ್ಲೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಿನಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಪ್ರಕೋಷ್ಠದ ಸಹ ಸಂಚಾಲಕ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ ವಂದಿಸಿದರು.

