ಉಡುಪಿ: ಬುಡೋಕಾನ್ ಸ್ಪೋರ್ಟ್ಸ್ ವತಿಯಿಂದ 22ನೇ ರಾಷ್ಟ್ರೀಯ ಕೆಬಿಐ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನ.14ರಿಂದ 16ರವರೆಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಾಮನ್ ಪಾಲನ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ.14ರಂದು ಮಧ್ಯಾಹ್ನ 12ಕ್ಕೆ ಶಾಸಕ ಯಶ್ಪಾಲ್ ಸುವರ್ಣ ಕರಾಟೆ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಲಿದ್ದಾರೆ. ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಆಶೀರ್ವಚನ ನೀಡಲಿದ್ದಾರೆ. ಕಿದಿಯೂರು ಉದಯ್ ಕುಮಾರ್ ಫ್ಯಾಮಿಲಿ ಟ್ರಸ್ಟ್ ನ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ನ.16ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. 13 ರಾಜ್ಯಗಳಿಂದ ಹಲವಾರು ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಘುರಾಜ್ ಪಣಿಯಾಡಿ, ಜತೆ ಕಾರ್ಯದರ್ಶಿ ರಕ್ಷಿತ್ ಡಿ.ಕೋಟ್ಯಾನ್, ಅಶೋಕ್ ಕುಮಾರ್, ಶ್ರೇಯಸ್ ಉಪ್ಪೂರು ಇದ್ದರು.

