ಉಡುಪಿ: ಕಾಡು ಬಿಟ್ಟು ನಾಡಿಗೆ ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಿದ ಘಟನೆ ಬೈಂದೂರು ತಾಲೂಕಿನ ತೆಗರ್ಸೆ ಗ್ರಾಮದ ಮೊಗವೀರ ಗರಡಿ ಎಂಬಲ್ಲಿ ನಡೆದಿದೆ.
ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಕಾಳಿಂಗ ಸರ್ಪವನ್ನು ಕಂಡ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಕೂಡಲೇ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಕಾಯಿಶ್ ಭಟ್ಕಳ ಹಾಗೂ ಯಾಸಿನ್ ಶಿರೂರು ಅವರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಬಳಿಕ ಕಾಳಿಂಗ ಸರ್ಪವನ್ನು ಸುರಕ್ಷಿತ ತಾಣಕ್ಕೆ ಬಿಡಲಾಯಿತು. ಆ ಮೂಲಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅಪರೂಪದ ಕಾಳಿಂಗ ಸರ್ಪವನ್ನು ನೋಡಲು ಸಾಕಷ್ಟು ಸಂಖ್ಯೆ ಗ್ರಾಮಸ್ಥರು ಸೇರಿದ್ದರು. ಹಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು.

