ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಈಗ ಕಂಬಳದ ಸೀಸನ್ ಪ್ರಾರಂಭಗೊಂಡಿದೆ.  ಈಗೀಗ ಸಾಂಪ್ರದಾಯಿಕ ಕಂಬಳಗಳ ಆಯೋಜನೆಗೂ ಲಕ್ಷಾಂತರ ರೂ. ಖರ್ಚಾಗುತ್ತಿದೆ. ಹೀಗಾಗಿ ಈ ಆಚರಣೆಯನ್ನು ಉಳಿಸಿ-ಬೆಳೆಸಲು ಸರಕಾರದ ಅನುದಾನ ಅಗತ್ಯವಿದೆ ಎಂದು ಸಾಂಪ್ರದಾಯಿಕ ಕಂಬಳ ಸಮಿತಿ ಸರಕಾರವನ್ನು ಒತ್ತಾಯಿಸಿದೆ.

ಉಡುಪಿ ಜಿಲ್ಲೆಯಲ್ಲಿ ವಂಡಾರು, ಕೊಡೇರಿ ಹಕ್ರೆಮಠ, ಉಳ್ಳೂರು, ಮಣೂರು, ಬಿಲ್ಲಾಡಿ, ಕೆರಾಡಿ, ಹೆಗ್ಗುಂಜೆ, ಎಲ್ಲೂರು, ಯಡ್ತಾಡಿ ಸಹಿತ 55 ರಿಂದ 60 ಕಡೆ ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಜಿಲ್ಲೆಯ ಕಂಬಳಗಳಲ್ಲಿ ಶೇ.99 ರಷ್ಟು ಸಾಂಪ್ರದಾಯಿಕವೇ ಆಗಿವೆ.

ಸ್ಪರ್ಧಾ ಕಂಬಳಕ್ಕೆ ಈ ಹಿಂದೆ ಸರಕಾರ 5 ಲಕ್ಷ ರೂ. ತನಕ ಅನುದಾನ ನೀಡುತ್ತಿತ್ತು. ಆದರೆ ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳಿಗೆ ಈ ತನಕ ಅನುದಾನ ನೀಡಿಲ್ಲ.ಸರಕಾರ ಈ ಅಧಿವೇಶನದಲ್ಲಿ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಮಿತಿಯ ಅಧ್ಯಕ್ಷ ಸುಧಾಕರ ಹೆಗ್ಡೆ ಮತ್ತು ಕಾರ್ಯದರ್ಶಿ ಪೃಥ್ವಿರಾಜ್ ಒತ್ತಾಯ ಮಾಡಿದ್ದಾರೆ.