ಉಡುಪಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಪ್ರಸಾದ್ ಕಾಂಚನ್ ಅವರ ಜನ್ಮದಿನದ ಅಂಗವಾಗಿ ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಇಂದು ‘ನೇತ್ರದಾನ ಹಾಗೂ ನೇತ್ರದಾನ ಜಾಗೃತಿ ಶಿಬಿರ’ವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಇಂದಿನ ಯುವಜನತೆ ಜೀವನದಲ್ಲಿ ಸಮಾಜಮುಖಿ ಚಿಂತನೆ ಅಳವಡಿಸಿಕೊಂಡು ಸಮಾಜಕ್ಕೆ ದೃಷ್ಠಿ ಕೊಡುವ ಕೆಲಸ ಮಾಡಬೇಕು. ನೇತ್ರದಾನದ ಅರಿವನ್ನು ಎಲ್ಲರೂ ಹೊಂದಬೇಕು. ನಾವು ಅಗಲಿದ ಬಳಿಕ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಬೆಳಕಾಗಬೇಕು ಎಂದು ಹೇಳಿದರು.

ನಾವು ನಮಗೋಸ್ಕರ ಹುಟ್ಟುಹಬ್ಬ ಆಚರಿಸದೆ, ನಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಸಮಾಜಕ್ಕೆ ಏನಾದರೂ ಒಳ್ಳೆಯ ಕಾರ್ಯವನ್ನು ಮಾಡಬೇಕು. ಇಂತಹ ಸಮಾಜಮುಖಿ‌ ಕಾರ್ಯಕ್ರಮಗಳ ಮೂಲಕ ಯುವಕರನ್ನು ಜಾಗೃತಗೊಳಿಸಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಸಂಚರಿಸಿ ಯುವಕರನ್ನು‌ ಸಂಘಟಿಸುತ್ತಾ, ಅವರ ಆಶಾಭಾವನೆಗಳನ್ನು ಅರ್ಥೈಸಿಕೊಂಡು ದೇಶದ ಮುಂದಿನ ಭವಿಷ್ಯಕ್ಕಾಗಿ ಬಹಳ ಮುತುರ್ವಜಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ನಮ್ಮ ಪಕ್ಷದ ಯುವ ನಾಯಕರು ಯುವಕರನ್ನು ಸಂಘಟಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮನುಷ್ಯ ಏನಾದರೂ ಸಾಧನೆ ಮಾಡಬೇಕಾದರೆ ಕಣ್ಣುಗಳು ಬಹಳ ಮುಖ್ಯ. ಕಣ್ಣುಗಳು ಇಲ್ಲದಿದ್ದರೆ ಪ್ರಪಂಚದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಯುವ ಕಾರ್ಯಕರ್ತರಲ್ಲಿ ನೇತ್ರದಾನದ ಅರಿವು, ಸಮಾಜದ ಚಿಂತನೆ ಜಾಗೃತಗೊಂಡರೆ ಕಾಂಗ್ರೆಸ್ ಪಕ್ಷದ ಭವಿಷ್ಯ ಹತ್ತು ವರ್ಷ ಮುಂದಕ್ಕೆ ಹೋಗುತ್ತದೆ. ತಾಳ್ಮೆ, ಛಲ, ತ್ಯಾಗ ಮನೋಭಾವನೆಯನ್ನು ಕಾರ್ಯಕರ್ತರು ರೂಢಿಸಿಕೊಳ್ಳಬೇಕು ಎಂದರು.

ಹುಟ್ಟು ಹಬ್ಬ ಆಚರಿಸಿಕೊಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಈ ಬಾರಿ ಯುವ ಕಾಂಗ್ರೆಸ್ ಕಾರ್ಯಕರ್ತರು ನೇತ್ರದಾನದ ಹೆಸರಲ್ಲಿ ಯುವಕರನ್ನು ಸಂಘಟಿಸುವ ಮಹತ್ತರ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾವು ರಾಜಕೀಯದಲ್ಲಿ ಸಮಾಜ ಸೇವೆಯ ಮೂಲಕ ಬೆಳೆಯಬೇಕಾಗಿದೆ.ಇವತ್ತು ಮೂವತ್ತು ಲಕ್ಷ ಜನರಿಗೆ ಕಣ್ಣಿನ ಸಮಸ್ಯೆ ಇದ್ದು ,ಕಾಂಗ್ರೆಸ್ ಪಕ್ಷ ದ ಯುವಕರು ತಮ್ಮ ನೇತ್ರದಾನದ ಮೂಲಕ ಸಹಕಾರಿಯಾಗಲಿದ್ದಾರೆ ಎಂದರು.ಇವತ್ತು ಹೊಸದಾದ ಯುವಕರ ತಂಡ ಕಾಂಗ್ರೆಸ್ ನಲ್ಲಿದೆ.ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ ಬಾವುಟಾ ರಾರಾಜಿಸಲಿದೆ ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಮುಖಂಡರಾದ ಎಂ.ಎ. ಗಫೂರ್, ಗೀತಾ ವಾಗ್ಳೆ, ಹರಿಪ್ರಸಾದ್ ರೈ, ಸರಳಾ ಕಾಂಚನ್, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೇಶ್ ಶೆಟ್ಟಿ, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಜ್ಜನ್ ಶೆಟ್ಟಿ, ಎನ್ಎಸ್ ಯುಐ ಉಪಾಧ್ಯಕ್ಷ ಶರತ್ ಕುಂದರ್ ಉಪಸ್ಥಿತರಿದ್ದರು.