ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ನಡೆದ ದನದ ರುಂಡ ಪತ್ತೆ ಪ್ರಕರಣದ ಹಿಂದೆ ವ್ಯವಸ್ಥಿತವಾದ ಗೋ ಮಾಫಿಯಾ ದಂಧೆ ಇದೆ. ಇದು ಸ್ಥಳೀಯ ಆರು ಜನ ಹಿಂದೂಗಳು ಮಾಡಿರುವ ಕೃತ್ಯ ಅಲ್ಲ. ದುಡ್ಡಿಗೋಸ್ಕರ ಹಿಂದೂಗಳ ಭಾವನೆಗೆ ನೋವುಂಟು ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಬೇಕೆಂಬ ಕಾರಣಕ್ಕಾಗಿ ಇಸ್ಲಾಮಿಕ್ ಮತೀಯವಾದಿಗಳು ಅಲ್ಲಿನ ಸ್ಥಳೀಯರನ್ನು ಬಳಸಿದ್ದಾರೆ ಎಂಬ ಬಲವಾದ ಸಂಶಯವಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ? ಇವರಿಗೆ ಯಾರೆಲ್ಲ ಬೆಂಬಲ ಕೊಟ್ಟಿದ್ದಾರೆ. ಗೋ ಹತ್ಯೆ ಮಾಡಿದ ಬಳಿಕ ಮಾಂಸವನ್ನು ಎಲ್ಲೆಲ್ಲ ಮಾರಾಟ ಮಾಡುತ್ತಿದ್ದರು ಎಂಬುವುದರ ಬಗ್ಗೆ ಬಹಿರಂಗ ಪಡಿಸಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಪಡಿಸಿದರು.
ಇಸ್ಲಾಮಿಕ್ ಮತೀಯವಾದಿಗಳು ಹಿಂದೂ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳಿಗೆ ಹಿಂದೂಗಳನ್ನು ಬಳಸಿಕೊಳ್ಳುವ ಹೊಸ ದಾರಿಯನ್ನು ಹುಡುಕಿದ್ದಾರೆ. ಹೊಸ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಕೂಡ ನಿಷೇಧಿತ ಫಿಎಫ್ ಐ ಸಂಘಟನೆಯವರು ಕಳಸದ ಇಬ್ಬರು ಅಮಾಯಕ ಹಿಂದೂ ಯುವಕರನ್ನು ಬಳಸಿಕೊಂಡಿದ್ದರು.
ದೇಶದ ಬೇರೆ ಬೇರೆ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆದಾಗ ಹಿಂದೂಗಳು ಸಿಕ್ಕಿ ಬೀಳುತ್ತಿರುವುದು ಆಂತಕದ ವಿಚಾರ. ಕುಂಜಾಲು ಕೃತ್ಯದಲ್ಲಿಯೂ ಸ್ಥಳೀಯ ಆರು ಜನ ಹಿಂದೂಗಳನ್ನು ಬಂಧಿಸಲಾಗಿದೆ. ಆದರೆ ಇದು ಕೇವಲ ಆರು ಮಂದಿ ಮಾಡಿರುವ ಕೃತ್ಯ ಅಲ್ಲ. ಇದರ ಹಿಂದೆ ವ್ಯವಸ್ಥಿತವಾದ ಗೋ ಮಾಫಿಯಾದ ದಂಧೆ ಇದೆ ಎಂದು ದೂರಿದರು. ಗೋ ಹತ್ಯೆ ಮಾಡಿ ಅದರ ರುಂಡ ಮತ್ತು ಕಾಲುಗಳನ್ನು ರಸ್ತೆಗೆ ಎಸೆದ ಕೃತ್ಯವನ್ನು ವಿಶ್ವ ಹಿಂದು ಪರಿಷತ್ ಬಲವಾಗಿ ಖಂಡಿಸುತ್ತದೆ ಎಂದರು.

