ಉಡುಪಿ: ಇಂದು ಆಷಾಢ ಅಮಾವಾಸ್ಯೆ. ಕರಾವಳಿ ಜಿಲ್ಲೆಗಳಲ್ಲಿ ತುಳು ಪದ್ಧತಿಯಂತೆ ಆಟಿ ಅಮಾವಾಸ್ಯೆ ಆಚರಿಸಲಾಗುತ್ತದೆ. ಈ ದಿನ ಕಷಾಯ ಕುಡಿಯುವ ವಿಶಿಷ್ಟ ಸಂಪ್ರದಾಯ ಚಾಲ್ತಿಯಲ್ಲಿದೆ. ಸೂರ್ಯೋದಯಕ್ಕೆ ಮುನ್ನ ಪುರುಷರು ಪಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತರುತ್ತಾರೆ.

ಬಳಿಕ ಈ ತೊಗಟೆಯಿಂದ ಕಷಾಯ ತಯಾರಿಸಿ ಕುಡಿಯುವುದು ಪದ್ಧತಿ. ಈ ದಿನ ಪಾಲೆ ಮರದಲ್ಲಿ ರೋಗ ನಿರೋಧಕ ಅಂಶಗಳು ಇರುತ್ತವೆ ಅನ್ನೋದು ಇಲ್ಲಿನ ನಂಬಿಕೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೆ ಆಟಿ ಕಷಾಯ ಕುಡಿಯುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿಯೂ ವಿತರಿಸುವ ಪರಿಪಾಠ ಇದೆ. ತುಳುಕೂಟ ಸಂಸ್ಥೆಯ ಆಶ್ರಯದಲ್ಲಿ ನೂರಾರು ಮಂದಿಗೆ ಕಷಾಯ ವಿತರಣೆ ನಡೆಯಿತು. ಕಷಾಯ ಕುಡಿದು ಗೇರು ಬೀಜ ತಿಂದು, ಮೆಂತೆ ಗಂಜಿ ಉಣ್ಣುವ ಮೂಲಕ ದೇಹವನ್ನು ತಂಪು ಮಾಡಲಾಗುತ್ತದೆ.