ಉಡುಪಿ: ಅಜೆಕಾರು ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ. ಈತನ ದೈವ ಕುಣಿತ ಈಗ ವೈರಲ್ ಆಗುತ್ತಿದೆ. ಇದು ಅನುವಂಶೀಯವಾಗಿ ಈತನಿಗೆ ಬಂದ ಸಿದ್ದಿ ಎಂದು ಹೇಳಲಾಗುತ್ತಿದೆ.

ಶಿರ್ಲಾಲು ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಸಮರ್ಥ್ ಎನ್ನುವ ಹುಡುಗನೇ ದೈವ ನರ್ತವನ್ನು ಮಾಡಿ ಸಣ್ಣ ವಯಸ್ಸಿನಲ್ಲೇ ತಮ್ಮ ಅಜ್ಜನ ಮತ್ತು ತಂದೆಯ ಕಸುಬನ್ನು ಮುಂದುವರಿಸಿಕೊಂಡು ಹೋಗಿದ್ದಾನೆ. ಈತನ ಧಾರ್ಮಿಕ ನಂಬಿಕೆಗೆ ಸ್ಥಳೀಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಅಜ್ಜನನ್ನು ನೋಡಿ ಕಲಿತದ್ದು ಒಂದು ಕಡೆಯಾದರೆ, ತಂದೆ ಹರೀಶ ಅವರ ಮಾರ್ಗದರ್ಶನಲ್ಲಿ ಸಮರ್ಥ್, ತನ್ನಿಮಾನಿಗ ಹೆಣ್ಣು ದೈವದ ಬಣ್ಣ ಹಚ್ಚಿ ಕೋಲ ನಿರ್ವಹಿಸಿದ್ದಾನೆ. ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕಲೆಯನ್ನು ಬಾಲಕ ಸಣ್ಣ ವಯಸ್ಸಿನಲ್ಲೇ ಕಲಿತು ಕೋಲ ಕಟ್ಟಿರುವುದು ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ತನ್ನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು ಮತ್ತು ನಸುಕಿನ 2 ಗಂಟೆ ಸುಮಾರಿಗೆ ಈ ಕೋಲ ಆರಂಭವಾಗುತ್ತದೆ. ಈ ಕೋಲದಲ್ಲಿ ಕರಿಮಣಿ ಕಟ್ಟುವ ವಿಶೇಷ ಪದ್ದತಿಯಿದೆ. ನೇಮ ನಡೆಯುವ ವೇಳೆ, ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ಸಂಪ್ರದಾಯವೂ ಇದೆ.

ಹನ್ನೆರಡು ವರ್ಷದ ಬಾಲಕನೊಬ್ಬ ತನ್ನಿಮಾನಿಗ ದೈವದ ಗಗ್ಗರ ಕಟ್ಟಲು ಇರುವ ಕಟ್ಟುಪಾಡು, ಸಂಪ್ರದಾಯಗಳನ್ನು ಪಾಲಿಸಿ, ಯಶಸ್ವಿಯಾಗಿ ದೈವ ನರ್ತನ ಮಾಡಿರುವುದು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಇದು ನಮ್ಮ ತುಳುನಾಡಿನ ಹೆಮ್ಮೆ ಮತ್ತು ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬಾಲಕನ ದೈವ ನರ್ತನ ಎಲ್ಲಡೆ ಸುದ್ದಿ ಮಾಡುತ್ತಿದೆ.

View this post on Instagram

A post shared by News Karnataka (@newskarnataka)