ಉಡುಪಿ: ಮಲ್ಪೆ ಠಾಣೆಯ ಪೊಲೀಸರು ಬಂಧಿಸಿದ್ದ ಹತ್ತು ಮಂದಿ ಬಾಂಗ್ಲಾದೇಶದ ಪ್ರಜೆಗಳಿಗೆ ಉಡುಪಿ ನ್ಯಾಯಾಲಯವು ಎರಡು ವರ್ಷ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.

ಬಾಂಗ್ಲಾ ದೇಶದ ಪ್ರಜೆಗಳಾದ ಹಕೀಮ್‌ ಅಲಿ, ಸುಜೋನ್‌ ಎಸ್‌.ಕೆ., ಇಸ್ಮಾಯಿಲ್‌ ಎಸ್‌.ಕೆ, ಕರೀಮ್‌ ಎಸ್‌.ಕೆ. , ಸಲಾಂ ಎಸ್‌.ಕೆ., ರಾಜಿಕುಲ್‌ ಎಸ್‌.ಕೆ., ಮೊಹಮ್ಮದ್‌ ಸೋಜಿಬ್‌, ರಿಮೂಲ್‌, ಮೊಹಮ್ಮದ್‌ ಇಮಾಮ್‌ ಶೇಖ, ಮೊಹಮ್ಮದ್‌ ಜಹಾಂಗಿರ ಆಲಂ ಶಿಕ್ಷೆಗೆ ಒಳಗಾದವರು.

2024 ಅಕ್ಟೋಬರ್‌ 11ರಂದು ಸಂಜೆ ಮಲ್ಪೆಯ ವಡಭಾಂಡೇಶ್ವರ ಬಸ್‌ ನಿಲ್ದಾಣದ ಬಳಿಯಿಂದ 7 ಮಂದಿಯನ್ನು ಹಾಗೂ ಅನಂತರ ಈ ಪ್ರಕರಣದ ತನಿಖೆ ನಡೆಸಿದ್ದ ಮಲ್ಪೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಉಳಿದ ಮೂವರನ್ನು ಬಂಧಿಸಿದ್ದರು.

ಇವರು ಭಾರತ ದೇಶದ ಯಾವುದೇ ಅನುಮತಿ, ದಾಖಲೆಗಳನ್ನು ಪಡೆಯದೆ ಅಕ್ರಮವಾಗಿ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸಿ ಬಾಂಗ್ಲಾ ದೇಶದಿಂದ ಉಡುಪಿ ತಾಲ್ಲೂಕಿನ ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿದ್ದರು ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಉಡುಪಿಯ ಪ್ರಧಾನ ಹಿರಿಯ ಸಿವಿಲ್‌ ಮತ್ತು ಸಿಜೆಎಂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.