ತುಮಕೂರು : ಪಾವಗಡ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನು ಹತ್ಯೆಗೈದಿದ್ದ ಮಾಜಿ ನಕ್ಸಲ್ ಒಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲು ಬಂಧಿತ ನಕ್ಸಲ್. ಇವನು 2005ರ ಫೆಬ್ರವರಿ 10ರಂದು ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ವೆಂಕಟಮ್ಮನಹಳ್ಳಿಯ ಶಾಲೆಯಲ್ಲಿ ಭದ್ರತೆಗೆ ನೇಮಕವಾಗಿದ್ದ 9 ಜನ ಪೊಲೀಸರ ಪೈಕಿ 7 ಜನ ಪೊಲೀಸರು ಮತ್ತು ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ.
ಬಂಧಿತ ಆಂಧ್ರಪ್ರದೇಶದ ಮಾಜಿ ನಕ್ಸಲ್ ಬಂದೆಲ ಬಾಯನ್ನನ ಮಗನಾದ ಚಂದ್ರ ಮುತ್ಯಾಲು ಅಲಿಯಾಸ್ ಬಂದೆಲ ಮುತ್ಯಾಲುನನ್ನು ಪಾವಗಡ ಗ್ರಾಮಾಂತರ ವೃತ್ತದ ಸಿ ಗಿರೀಶ್, ಎಎಸ್ಐ ಗೋವಿಂದರಾಜು ಮತ್ತು ಸಿಬ್ಬಂದಿಗಳಾದ ಧರ್ಮಪಾಲನಾಯ್ಕ, ಪುಂಡಲೀಕ ಲಮಾಣಿ ಆರೋಪಿಯನ್ನು ದಸ್ತೆಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ.ಕೆ.ವಿ. ತಿಳಿಸಿದ್ದಾರೆ.

