ದೆಹಲಿ: ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಸಿಐಎಸ್ಎಫ್ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದಾರೆ. ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿರುವ ಪ್ರಕರಣ ಇದಾಗಿದೆ. ಪ್ರಕರಣ ಬೆನ್ನಲ್ಲೇ ಕಪಾಳಮೋಕ್ಷ ಮಾಡಿದ ಅಧಿಕಾರಿ ಯಾರು ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗಿದೆ.
ಹೌದು. . ಕಂಗನಾ ರಣಾವತ್ ಮೇಲೆ ಸಿಐಎಸ್ಎಫ್ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದಕ್ಕೆ ಕಾರಣ ನೋಡುವುದಾದರೇ, 2020ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ್ದ ಮೂರು ಕೃಷಿ ಕಾಯಿದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ದೆಹಲಿಯಲ್ಲಿ ಉಗ್ರ ಹೋರಾಟ ನಡೆಸಿದ್ದರು.
ರೈತರಿಗೆ ಮಂಡಿ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಕರೆದಿದ್ದರು. ಈ ಹೇಳಿಕೆಯಿಂದ ಸಿಟ್ಟಿಗೆದ್ದ CISF ಅಧಿಕಾರಿ ಕುಲ್ವಿಂದರ್ ಕೌರ್, ಕಂಗನಾ ಅವರು ಚಂಡೀಗಢ ಏರ್ಪೋರ್ಟ್ಗೆ ಆಗಮಿಸುತ್ತಿದಂತೆ ರೈತರಿಗೆ ಅವಮಾನ ಮಾಡಿದ್ದರೆಂದು ಕಪಾಳ ಮೋಕ್ಷ ಮಾಡಿದ್ದಾರೆ.
35 ವರ್ಷದ ಕುಲ್ವಿಂದರ್ ಕೌರ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF)ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಲ್ವಿಂದರ್ ಕೌರ್ CISF ಗೆ 2009ರಲ್ಲಿ ಸೇರಿಕೊಂಡರು. 2021ರಿಂದ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕುಲ್ವಿಂದರ್ ಕೌರ್ ಅವರು ಪಂಜಾಬ್ನ ಸುಲ್ತಾನ್ಪುರ್ ಲೊಧಿ ಮೂಲದವರು. ಕಳೆದ ಎರಡು ವರ್ಷದ ಹಿಂದಷ್ಟೇ ಚಂಡಿಗಢ ಏರ್ಪೋರ್ಟ್ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಕುಲ್ವಿಂದರ್ ಕೌರ್ ಪತಿ ಕೂಡ CISF ಸಿಬ್ಬಂದಿಯಾಗಿದ್ದಾರೆ. ಇವರ ಪತಿ ಕೂಡ ಇದೇ ಏರ್ಪೋರ್ಟ್ನಲ್ಲಿ ಕೆಲಸ ಮಾಡ್ತಿದ್ದಾರೆ. ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ರೈತ ಪರ ಹೋರಾಟಗಾರರು. ಕಿಸಾನ್ ಮಂಜ್ದೂರ್ ಸಂಘರ್ಷ ಕಮಿಟಿಯ ಕಾರ್ಯದರ್ಶಿಯಾಗಿದ್ದರು. ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಹಿಮಾಚಲದ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿರುವ ಕಂಗನಾ ರಣಾವತ್ ಚಂಡೀಗಢದಿಂದ ದೆಹಲಿಗೆ ತೆರಳಲು ಹೊರಟಿದ್ದ ವೇಳೆ ಚಂಡೀಗಢದ ಏರ್ಪೋರ್ಟ್ನಲ್ಲಿದ್ದ ಸಿಐಎಸ್ಎಫ್ನ ಮಹಿಳಾ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವಾಗಲೇ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

