ಚೆನೈ: ಸ್ವಚ್ಛತಾ ಸಿಬ್ಬಂದಿ ಕಸದಲ್ಲಿ ಸಿಕ್ಕ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಜ್ರದ ಹಾರವನ್ನು ವಾರಸುದಾರರಿಗೆ ವಾಪಸ್‌ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಕೂಡ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಸ್ವಚ್ಛತಾ ಸಿಬ್ಬಂದಿ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಸ್ವಚ್ಛತಾ ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ತೀವ್ರ ಶೋಧದ ಫಲವಾಗಿ ₹5 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್ ಅದರ ಮಾಲೀಕರಿಗೆ ಮರಳಿದೆ.

ಚೆನ್ನೈನ ವಿರುಗಂಪಕ್ಕಂ ನಿವಾಸಿ ದೇವರಾಜ್‌ ಎನ್ನುವವರು ತಮ್ಮ ಸಂಬಂಧಿಯೊಬ್ಬರಿಗೆ ಗಿಫ್ಟ್‌ ನೀಡಲು ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್‌ಅನ್ನು ಖರೀದಿಸಿದ್ದರು. ಆದರೆ ಮನೆಯಲ್ಲಿ ತಿಳಿದೇ ಆಕಸ್ಮಿಕವಾಗಿ ಕಸದೊಂದಿಗೆ ವಜ್ರದ ನೆಕ್ಲೇಸ್‌ ಅನ್ನು ಕೂಡಾ ತೊಟ್ಟಿಗೆ ಎಸೆದಿದ್ದಾರೆ. ಮೊದಲು ಈ ವಿಚಾರ ತಿಳಿದಿರಲಿಲ್ಲ. ಬಳಿಕ ದೇವರಾಜ್‌ಗೆ ಕಸದೊಂದಿಗೆ ನೆಕ್ಲೇಸ್‌ ಕೂಡಾ ಹೋಗಿದೆ ಎಂದು ತಿಳಿದು ಬಂದಿದೆ.

ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಭರಣವನ್ನು ಕಳೆದುಕೊಂಡ ಅವರು, ಕೂಡಲೇ ಕೂಡಲೇ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಅಧಿಕಾರಿಗಳನ್ನು ಸಂಪರ್ಕಿಸಿ ಡೈಮಂಡ್‌ ನೆಕ್ಲೇಸ್‌ ಕಳೆದುಕೊಂಡ ವಿಚಾರವನ್ನು ವಿವರಿಸಿದ್ದಾರೆ. ದೇವರಾಜ್‌ ಅವರ ಮನವಿಗೆ ಸ್ಪಂದಿಸಿದ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಜಿಸಿಸಿ ಗುತ್ತಿಗೆದಾರರ ಚಾಲಕ ಜೆ. ಆಂಥೋನಿಸಾಮಿ ಸ್ವಚ್ಛತಾ ಸಿಬ್ಬಂದಿಗಳ ಗಮನಕ್ಕೆ ತಂದಿದ್ದು, ಹುಡುಕುವಂತೆ ಸೂಚಿಸಿದ್ದಾರೆ.

ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ ಸ್ವಚ್ಛತಾ ಸಿಬ್ಬಂದಿ ಸತತ ಹುಡುಕಾಟದ ಬಳಿಕ ಕೊನೆಯಲ್ಲಿ ಸ್ವಚ್ಛತಾ ಸಿಬ್ಬಂದಿಯೋರ್ವರಿಗೆ ಕಸದಿಂದ ಹುದುಕಿಹೋಗಿದ್ದ ಈ ಹಾರ ಸಿಕ್ಕಿದೆ. ಕೂಡಲೇ ಅವರು ಅದನ್ನು ಸ್ವಚ್ಛಗೊಳಿಸಿ ದೇವರಾಜ್‌ ಅವರಿಗೆ ಹಿಂದಿರುಸಿದ್ದಾರೆ. ₹5 ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್ ಮತ್ತೆ ಸಿಗಲು ಸಹಾಯ ಮಾಡಿದ ಆಂಥೋನಿಸಾಮಿ ಮತ್ತು ಸ್ವಚ್ಛತಾ ಸಿಬ್ಬಂದಿಗೆ ದೇವರಾಜ್‌ ಹಾಗೂ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.