ದೆಹಲಿ: ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಮೂಲಕ ಮಿಂಚಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಲಭಿಸಿದ ಪ್ರಶಸ್ತಿ ಮೊತ್ತವನ್ನು ಇದೀಗ ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು.
ಆದರೆ ಟೀಮ್ ಇಂಡಿಯಾ ಬೌಲರ್ಗಳ ಮಿಂಚಿನ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲುವಲ್ಲಿ ಶ್ರೀಲಂಕಾ ಬ್ಯಾಟರ್ಗಳು ಪರದಾಡಿದರು. ಶ್ರೀಲಂಕಾ ತಂಡವು ಕೇವಲ 50 ರನ್ಗಳಿಗೆ ಆಲೌಟ್ ಆಯಿತು. ಅಲ್ಲದೆ 51 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6.1 ಓವರ್ಗಳಲ್ಲಿ ಟಾರ್ಗೆಟ್ ತಲುಪುವ ಮೂಲಕ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಪಂದ್ಯದಲ್ಲಿ ಶ್ರೀ ಲಂಕಾನ್ನರ 6ವಿಕೆಟ್ ಕಬಳಿಸಿ ಕರಾರುವಾಕ್ ದಾಳಿ ಸಂಘಟಿಸಿದ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಆದರೆ ತನಗೆ ಸಿಕ್ಕಿದ 5 ಸಾವಿರ ಡಾಲರ್ ಪ್ರಶಸ್ತಿ ಮೊತ್ತವನ್ನು ಸಿರಾಜ್ ಕೊಲಂಬೊದ ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದರು.
ಈ ಬಗ್ಗೆ ಮಾತನಾಡಿದ ಸಿರಾಜ್, ಮೈದಾನದ ಸಿಬ್ಬಂದಿಗಳು ಇರದಿದ್ದರೆ ಈ ಟೂರ್ನಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ನಗದು ಬಹುಮಾನ ಅವರಿಗೆ ಸಲ್ಲಬೇಕು. ಇದನ್ನು ನಾನು ಅವರಿಗೆ ನೀಡುತ್ತೇನೆ ಎಂದು ತಿಳಿಸಿದರು. ಇದೀಗ ಮೊಹಮ್ಮದ್ ಸಿರಾಜ್ ಅವರ ಮಾನವೀಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.