ಮೈಸೂರು: ಕ್ರೀಡೆಯಲ್ಲಿ ಸೋಲು ಮತ್ತು ಗೆಲುವುಗಳನ್ನು ಸಮನಾಗಿ ಕಾಣಬೇಕು ಎಂದು ಕ್ರೀಡಾಪಟುಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಕಿವಿಮಾತು ಹೇಳಿದರು.
ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣೆಯ ಅಂಗವಾಗಿ 3 ದಿನಗಳ ಜೆಎಸ್ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಸಂಜೆ ಉದ್ಘಾಟಿಸಿದ ಅವರು, ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿರುವ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡುತ್ತಾ ಬರುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ನೀವೇ ಭಾಗ್ಯಶಾಲಿಗಳು. ಈ ದಿನಗಳು ನಿಮ್ಮ ಭವಿಷ್ಯದ ದಿನಗಳಲ್ಲಿ ಅವಿಸ್ಮರಣೀಯ ದಿನಗಳಾಗುತ್ತವೆ. ಸುತ್ತೂರು ಶ್ರೀಗಳು ಈ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಎಂದು ಹೇಳಿ, ಸರ್ಕಾರವೂ ಸಹ ಕ್ರೀಡಾಪಟುಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು.
ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ಕ್ರೀಡಾಕೂಟವು ಅದ್ದೂರಿ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಹಳ ಸಹಕಾರಿಯಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳ ನಾಯಕತ್ವ ಗುಣವನ್ನು ಬೆಳೆಸುತ್ತವೆ. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿ ಭಾಗವಹಿಸುತ್ತಿರುವ ಕ್ರೀಡಾಪಟುಗಳೆಲ್ಲರಿಗೂ ಶುಭಾಶಯಗಳನ್ನು ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ರಾಜ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾರವರು ಮಾತನಾಡಿ, ಈ ಸಂಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಆಲದ ಮರದಂತಿದ್ದು, ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡುತ್ತಾ ಪೋಷಿಸುತ್ತಿದೆ. ಇಂದಿನ ಪಥಸಂಚಲನವು ಅದ್ಭುತ, ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕುವ ವಿದ್ಯಾರ್ಥಿಗಳನ್ನು ನೋಡುವುದೇ ಒಂದು ಚೆಂದ, ಆಟ ಆಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುವುದು. ಸುತ್ತೂರು ಶ್ರೀಗಳು ಕರ್ನಾಟಕದ ಆಸ್ತಿ ಎಂದು ಹೇಳುತ್ತಾ, ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿರುತ್ತವೆ ಎಂದರು. ಕ್ರೀಡಾಪಟುಗಳ ಪರವಾಗಿ ನಾರ್ವೆ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಚೈತನ್ಯ ಹಾಗೂ ಕ್ರೀಡಾಧಿಕಾರಿಗಳ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಿ.ಜಿ. ಪೂಜಾರ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರರು, ಎಸ್. ಪಿ. ಮಂಜುನಾಥ್ರವರು, ಎಸ್. ಶಿವಕುಮಾರಸ್ವಾಮಿ, ಎಸ್. ಪಿ. ಉದಯಶಂಕರ್, ಮಾಜಿ ಜಿಪಂ ಅಧ್ಯಕ್ಷ ಎಸ್.ಸಿ. ಬಸವರಾಜು, ಮೈಸೂರಿನ ವಿದ್ಯಾವರ್ಧಕ ಸಂಸ್ಥೆಗಳ ಅಧ್ಯಕ್ಷ ಗುಂಡಪ್ಪಗೌಡರು, ಮೈಸೂರಿನ ಮಾಜಿ ಮಹಾಪೌರರಾದ ವಿಶ್ವನಾಥ್, ಮೈಸೂರಿನ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರ ಆಪ್ತಕಾರ್ಯದರ್ಶಿಗಳಾದ ರೋಹಿತ್ ಗಂಗಾಧರ್, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಆಪ್ತಕಾರ್ಯದರ್ಶಿಗಳಾದ ಪ್ರದೀಪ್, ಕ್ರೀಡಾಕೂಟದ ಸಂಚಾಲಕ ಶ್ರೀ ಸಂಪತ್ತು ಹಾಗೂ ಸಂಸ್ಥೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.